ಬೇಕಲ್ ಕೋಟೆ..

ಬೇಕಲ್ ಕೋಟೆ..

2019 ರ ಮೇ 18 ರಂದು ಕೇರಳದ ಮನ್ನಾರ್ ಗೆ ಹೋಗಬೇಕು ಎಂದು ಅಂದಿನ ಪಯಣದ ಗುರಿ ನಿರ್ಧಾರ ಆಗಿತ್ತು. ನಮ್ಮ ಪಯಣದ ಗುರಿ ದೂರ ಇದ್ದರೆ ನೇರವಾಗಿ ಅಲ್ಲಿಗೆ ಹೋಗಿ ತಲುಪುವುದಾಗಿರದೇ ಪಯಣದ ಹಾದಿಯಲ್ಲಿ ಬರುವ ಪ್ರತಿಯೊಂದು ಸ್ಥಳಗಳನ್ನು ಆಸ್ವಾಧಿಸುತ್ತಾ ದಾರಿಯುದ್ದಕ್ಕೂ ಸಿಗುವ ಝರಿ,ತೊರೆ ನದಿಗಳನ್ನು ನೋಡುತ್ತಾ,ಅಲ್ಲಿ ಸಿಗುವ ಹಣ್ಣುಗಳ ರಾಶಿಯೊಂದಿಗೆ ಮಂದವೇಗದ ಪಯಣ ನಮ್ಮದು.ಅಂದು ರಾತ್ರಿ ಬಾಳೇಹೊನ್ನೂರು  ರಂಭಾಪುರಿ ಪೀಠದಿಂದ ನಮ್ಮ ಪಯಣ  ಮುಂಜಾನೆ ಐದುಗಂಟೆಗೆ ಆರಂಭ.ಮಲೆನಾಡಿನ ಮಧ್ಯಭಾಗ ಆಗಿದ್ದರಿಂದ ಈ ಮೊದಲು ಮೂರು ನಾಲ್ಕು ಬಾರಿ ಒಳ್ಳೆಯ ಹದಮಳೆ ಬಿದ್ದಿದ್ದರಿಂದ ಮುಂಜಾನೆಯ ದಟ್ಟ ಮಂಜಿನ ಜೊತೆಗೆ  ಚಳಿಯೂ ಆಗುತ್ತಿತ್ತು.ಬಾಳೆಹೊನ್ನೂರಿನ ಬಸ್ಟಾಂಡ್ ಎದುರು ಯಾವುದೋ ಒಂದು ಹೋಟೆಲ್‌ ನಲ್ಲಿ ಮಲೆನಾಡಿನ ಕಾಫಿ ಕುಡಿದು  ಕಾರು ಹತ್ತಿ ಹೊರಟೆವು.

ಬಾಳೆಹೊನ್ನೂರು ಕುಮುದಾಳ ಹುಟ್ಟೂರು.ಕುಮುದಾಳ ಬಾಲ್ಯದ ಊರು ಆಗಿದ್ದರಿಂದ ಅವಳ ಬಾಲ್ಯದಲ್ಲಿದ್ದ ಅಂದಿನ ಮಲೆನಾಡಸೊಬಗನು ಕೇಳುತ್ತಾ  ಕಾರಲ್ಲಿ ಬಿಸಿಗಾಳಿ ಹಾಕಿ ಚಳಿಕಾಯಿಸಿಕೊಳ್ಳುತ್ತಾ  ಹೊರನಾಡಿನ ಅನ್ನಪೂರ್ಣೆಯ ದರ್ಶನಕ್ಕೆ ನಮ್ಮ ದಾರಿ ಸಾಗಿತ್ತು. ಆ ರಸ್ತೆಯು  ಪಕ್ಕ ಭದ್ರಾನದಿಯ ಇಕ್ಕೆಲದಲ್ಲೇ ಸಾಗುವ ನಮಗೆ ಕೆಲದೂರದವರೆಗೆ ದಟ್ಟ ಇಬ್ಬನಿಯೂ ಕಂಡರೆ ಇನ್ನೂ ಕೆಲದೂರದವರೆಗೆ ಸಾಧಾರಣವಾದ ಮಂಜು  ಸಿಂಚನ ಆಗುತ್ತಿತ್ತು. ಹದಿನೈದು ಇಪ್ಪತ್ತು  ಕಿಲೋಮೀಟರ್ ಆದಮೇಲೆ  ರಸ್ತೆಯ ಮೇಲೆಲ್ಲಾ ದೊಡ್ಡ ದೊಡ್ಡ ಜಂಬೂ ನೇರಳೆ ಹಣ್ಣುಗಳು ಬಿದ್ದಿದ್ದವು. ತಕ್ಷಣವೇ ಕಾರನ್ನು ಸೈಡಿಗೆ ಹಾಕಿ ತೂಕಡಿಸುತ್ತಿದ್ದ ಅಳಿಯ ಶಿವ ಇಳಿಯಲೇ ಎಂದೇಳಿದೆ. ಕಣ್ಣುಜ್ಜುತ್ತಾ ಬಂದ ಶಿವ ಏನು ಮಾಮ ಎಂದ ನೇರಳೆಹಣ್ಣಿನ ಮರ  ಹತ್ತಬೇಕು ಬಾ ಅಂದೆ. ಕತ್ಲಾಗಿತಲ್ಲ ಮಾಮ ಅಂದ. ಪೂರ ಬೆಳಕಾಗದೇ ಇದ್ದರೂ ಭಾಗಶಃ ಬೆಳಕು ಹರಿದಿತ್ತು. ಇಬ್ಬನಿಯ ಸಿಂಚನ ಹಾಗೆ ಇತ್ತು. ತೇವಗೊಂಡ ಉದುರಿದ ತರಗೆಲೆಗಳ ಮೇಲೆ ಬಿದ್ದಿದ್ದ ಒಂದೆರಡು ಹಣ್ಣುಗಳ ಬಾಯಿಗೆ ಹಾಕಿ ಚಪ್ಪರಿಸಿದೆ. ತಣ್ಣಗೆ ಮತ್ತು ಬಹಳ ರುಚಿಯಾಗಿತ್ತು. ಹೋಗು ಕಾರಲ್ಲಿ ಕವರ್ ತಗಂಡು ಬಾ ಎಂದೇಳಿ ದೊಡ್ಡ ದೊಡ್ಡ ಹಣ್ಣುಗಳ ಆರಿಸುತ್ತಾ,ಇಷ್ಟವಾದವುಗಳ ತಿನ್ನುತ್ತಾ ಕುಳಿತಿದ್ದೆ. ಕಾಡುಮನುಷ್ಯನ ತರ ತಿಂದು ಬಹಳದಿನಗಳಾಗಿತ್ತು. ಎಲ್ಲೋ ನಗರಗಳಲ್ಲಿ ನಗದುಕೊಟ್ಟು, ನಾಗರಿಕರಂತೆ ತಿಂದು ಉಗಳಿದ್ದು  ಆತರಹದ ಓಪನ್ ನೇಚರ್ ಲ್ಲಿ ಯಾವಗಲೋ ಬಾಲ್ಯದಲ್ಲಿ ತಿಂದಿದ್ದ ನೆನಪು. ಕವರ್ ತರಲು ಹೋದ ಶಿವಪ್ಪನೊಂದಿಗೆ ಕುಮುದಾಳು ಇಳಿದು ಬಂದಳು.  ಮೂವರೂ ಸೇರಿ ಸುಮಾರು ಒಂದು ಕೆಜಿಯಷ್ಟು ಆರಿಸಿಕೊಂಡು ಅದರೊಳಗೆ ಬಾಯಿಗೆ ಗ್ಯಾಪ್ ಕೊಡದೆ ತಿಂದಿದ್ದ ನಾನು ಚಳಿ ಇದೆ ಬೆಳಿಗ್ಗೆ ಬೆಳಿಗ್ಗೆ ತಿನ್ನಬೇಡ್ರಪ್ಪ ಬಿಸಿಲು ಬಿದ್ದಮೇಲೇ ತಿನ್ನುವಿರಂತೆ ಎಂಬ ಎಚ್ಚರಿಕೆಯನ್ನೂ ಕೊಟ್ಟಳು. ಶೀತವಾಗಬಹುದು ಎಂದು ನನಗೂ ಅರಿವಿತ್ತು ಅದರೆ ಹಣ್ಣುಗಳ ನೋಡಿದ ಕೂಡಲೇ ತಿನ್ನುವ ಉತ್ಕಟತನ ಜಾಸ್ತಿಯಾಗಿ ತಿನ್ನದೇ ಸುಮ್ಮನೇ ಇರಲು ಮನಸಾಗದೆ  ಹಾಳು ವತ್ತಾರೆಯನ್ನೂ ಲೆಕ್ಕಿಸದೇ ತಿಂದಿದ್ದೆ. ಡ್ಯಾಶ್ ಬೋರ್ಡಲ್ಲೇ ಅ ಕವರ್ ಹಾಕಿದೆವು.ಅಷ್ಟೊತ್ತಿಗೆ ಸಂಪೂರ್ಣ ಬೆಳಕಾಗಿ  ಕೊಕ್ಕಕೋ ಕೋ ಎಂದು ಕೂಗಿ ಕೂಗಿ ಬೆಳಕು ಹರಿಸಿದ್ದ  ಕೆಂಪು ಕಾಡುಕೊಳಿಯ ಹುಂಜ ಮತ್ತು ತನ್ನ ಸಂಗಾತಿ ಹ್ಯಾಟೆ,ಹಾಗೂ ಹ್ಯಾಟೆಯ ಜೊತೆಗೆ  ಎರಡ್ಮೂರು ಕೋಳಿಯ ಮರಿಗಳೊಂದಿಗೆ ಆಗತಾನೆ ಮರ ಇಳಿದು  ರಸ್ತೆಪಕ್ಕದ ಕಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದವು.  ಗಾಡಿ ಸ್ಲೋ ಮಾಡಿದುದಕ್ಕೆ ಗಾಬರಿಯಾಗಿ ಕಾಡೊಳಗೆ ಓಡಿದವು. ನಾನು ಹತ್ತಾರು ಬಾರಿ ಕಾಡುಕೋಳಿಗಳ ನೋಡಿದ್ದೆಯಾದರೂ ಕುಟುಂಬದೊಂದಿಗೆ ಕಾಡುಕೋಳಿ ಕುಟುಂಬದೊಂದಿಗೆ ಕಂಡಿದ್ದು ಅದೇ ಮೊದಲು.ಕುಮುದಾ ಮತ್ತು ಕಾರಲ್ಲಿ ಇದ್ದವರೆಲ್ಲರಿಗೂ ತೋರಿಸಿ  ಮುಂದೆ ಸಾಗಿದೆವು.

 ಕಾಪೀತೊಟಗಳ ಮದ್ಯೆ ಕಡಿಮೆ ಟ್ರಾಫಿಕ್ನಲ್ಲಿ ಕೆಲವೇ ಹೊತ್ತಿನಲ್ಲಿ ‌ಹೊರನಾಡ ತಲುಪಿ‌ ಅನ್ನಪೂರ್ಣೇಶ್ವರಿ ದೇವಾಲಯದ ಪಾರ್ಕಿಂಗ್ ಪ್ಲೇಸ್ ತಲುಪಿ ಎಲ್ಲರೂ ಇಳಿದು ದೇವಾಲಯ ದರ್ಶನದ ಸಾಲಿನಲ್ಲಿ ನಿಂತುಕೊಂಡೆವು. ಬಹಳ ಬೇಗನೇ ಹತ್ತಿರದಿಂದಲೇ ದರ್ಶನ ಮಾಡಿ ಪುನಃ ಗಾಡಿಯತ್ರ ಬಂದಾಗ ಗಂಟೆ ಹತ್ತು ಆಗಿತ್ತು. ಪಾರ್ಕಿಂಗ್ ಪ್ಲೇಸ್ನ ಪೆನ್ಸಿಂಗ್ ಆಚೆಗೆ ಅಡಿಕೆ ಮರಗಳು,ಕಾಳುಮೆಣಸಿನ ಬಳ್ಳಿ  ಎತ್ತರದ ಬೆಟ್ಟಗಳನ್ನು ನೋಡಿ ಇಪ್ಪತ್ತು ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿ ಹೊರನಾಡಿಗೆ ಬಂದ ದಿನಗಳ ನೆನಪಿಸಿಕೊಂಡೆ. ಆ ದಿನಗಳಲ್ಲಿ ಕಾಳುಮೆಣಸಿನ ಬಳ್ಳಿಯ ನ್ನು ವೀಳ್ಯದೆಲೆಯ  ಬಳ್ಳಿಯೇ ಎಂದುಕೊಂಡಿದ್ದೆ. ಅದೊಂದು ಸ್ಥಳ ಇಪ್ಪತ್ತು ವರ್ಷಗಳ ಹಿಂದೆ ನೋಡಿದ ರೀತಿಯಲ್ಲಿ ಇದೇಯೇನೋ ಎಂದೇನಿಸಿ  ಕೆಲವೇ ನಿಮಿಷಗಳಲ್ಲಿ ಕಳಸೇಶ್ವರನ ದರ್ಶನ ಪಡೆದು ಕುದುರೆಮುಖ ಮಾರ್ಗ ಹಿಡಿದೆ  ನಾಲ್ಕೈದು ಕಿಮೀ ಮುಂದೆ ಬಂದರೆ ಎಡಕೊಂದು ಟೀ ಎಸ್ಟೇಟ್. ಆ ಟೀ ಎಸ್ಟೇಟ್ ಗೆ  ಎಷ್ಟು ಬಾರಿ ಬೇಟಿಕೊಟ್ಟಿದ್ದೇವೋ ಗೊತ್ತಿಲ್ಲ. 



ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮನಸೋ ಇಚ್ಚೆ ಓಡಾಡಿದೆವು. ನೂರಾರು ಸೆಲ್ಪಿಗಳ ತೆಗೆದು ಅದರ ಪಕ್ಕದಲ್ಲೇ ಇರುವ ಭದ್ರಾನದಿಯ ಉಪನದಿಯೊಳಗೆ ಕೆಲ ಹೊತ್ತು ಆಟ ಆಡಿ ದಾರಿ ದೂರ ಇದೆ ಬನ್ನಿ ಬನ್ನಿ ಎಂದು ಹೊರಟು ಬಂದೆವು.   ಕುದುರೆಮುಖ ಅಭಯಾರಣ್ಯದ ಚೆಕ್‌ ಪೋಸ್ಟ್‌ ಬಳಿ ಏನೇನೋ ಕುರುಕಲು ತಿಂಡಿಗಳನ್ನು ತೆಗೆದುಕೊಂಡು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದ ಒಳಗೆ ಪಯಣ ಶುರುಮಾಡಿದೆವು.  ನನಗೆ ಡ್ರೈವ್ ಮಾಡಲು  ಕೆಲವೇ ರಸ್ತೆಗಳಲ್ಲಿ ಇದೂ ಒಂದು. ಹಸಿರ ವನಸಿರಿಯ ಮಡಿಲಲ್ಲಿ ನಿದಾನವಾಗಿ ಸಾಗುವ ಪಯಣದ ಆನಂದ ಸುಖಮಯವಾಗಿರುತ್ತದೆ. ಈ ಅರಣ್ಯದಲ್ಲಿ ವಿಶೇಷವಾಗಿ ಸೀಬೆಕಾಯಿಗಳು ರಸ್ತೆಯುದ್ದಕ್ಕೂ ಸಿಗುತ್ತಾವೆ.  ಕುದುರೆಮುಖ ಗಣಿ ರನ್ನಿಂಗ್ ಇದ್ದಾಗ ವಸತಿ ಗೃಹಗಳಲ್ಲಿ ಹಾಕಿರಬೇಕು. 
  ಕುದುರೆಮುಖದ ಒಂದು ಚಿತ್ರಣ
 ಕೃಪೆ ನಾಗು ಆರ್ಟ್ಸ್. ಚಿತ್ರದುರ್ಗ
 
ಅವು ಈಗ ಸಂತಾನ ಅಭಿವೃದ್ಧಿ ಆಗಿ ಸಿಕ್ಕ ಸಿಕ್ಕಲೆಲ್ಲಾ ಬೆಳೆದಿವೆ.ಈಗ ಅಲ್ಲಿ ಗಣಿಗಾರಿಕೆ ನಿಲ್ಲಿಸಿ ಯಾವ ಜನವಸತಿಯೂ ಇಲ್ಲವಾದರೂ ಹಣ್ಣಿನ ಮರಗಳು ಹಾಗೇ ಉಳಿದಿವೆ. ಯಾವಾಗಲೋ ಒಮ್ಮೆ ಹೀಗೆ ಕಾರು ನಿಲ್ಲಿಸಿ ಸ್ವಲ್ಪದೂರ ಹೋದಾಗ‌ ಹತ್ತಾರು ಸೀಬೆ ಮರಗಳು ಕಂಡಿದ್ದವು. ಹತ್ತಿರ ಹೋಗಿ ನೋಡಿದರೆ  ಹಿಡಿಗಾತ್ರದ ಪಿಂಕ್ ಪಿಂಕ್  ಸೀಬೆಕಾಯಿಗಳು. ಇದು ನಮ್ಮ ಕಾಯಂ ಸ್ಥಳ. ಆ ರೋಡಿಗೆ ಹೋದರೆ ಆ ಸ್ಥಳಕ್ಕೋಗಿ ಎಷ್ಟು ಬೇಕೋ ಅಷ್ಟು ಸೀಬೆ ಹಣ್ಣುಗಳ ಕಿತ್ತು ತರುವೆವು. ಅಂತೆಯೇ ಅಂದು ಮೂರು ನಾಲ್ಕು ಕೆಜಿಯಷ್ಟು ಹಣ್ಣುಗಳನ್ನು ನಾನು ಶಿವು ಕಿತ್ತು ತಂದೆವು. ತುಂಗ ಮತ್ತು ಭದ್ರೆಯ ನದಿಮೂಲ ಇರುವುದು ಇಲ್ಲೇ ಗಾಡಿ ನಿಲ್ಲಿಸದೇ  ಹಸಿರ ವನರಾಶಿಯ ನೋಡುತ್ತಾ  ಸೀಬೆಕಾಯಿ ತಿನ್ನುತ್ತಾ,
ಶೀತವಾತಾವರಣದಲ್ಲಿ ಎಷ್ಟು ಸೀಬೆಕಾಯಿಗಳ ತಿನಬಹುದು? ತಲೆಗೆ ಒಂದೋ ಎರಡೋ ತಿಂದು ಹಾಗೆ ಸಾಗುವಾಗ ಅಡ್ಡವಾಗಿ ಸಿಗುವ ನದಿಗಳ ಸೇತುವೆಗಳು,ಜಲಪಾತಗಳನ್ನು ಕಾರಲ್ಲೇ ನೋಡುತ್ತಾ   ಮಂಗಳೂರಿನ ಕಡೆಗೆ ಪಶ್ಚಿಮ ಘಟ್ಟಗಳ ಸಾಲನ್ನು ಇಳಿದು ಸಮುದ್ರದ ಮಟ್ಟದ    ನೆಲ ಪ್ರದೇಶಕ್ಕೆ ಇಳಿದು ಮೂಡುಬಿದ್ರೆ ಕಡೆ ಬಂದೆವು. ಮೂಡುಬಿದ್ರೆಯ ಸಾವಿರ ಕಂಬಗಳ ಜೈನ ಬಸದಿ, ಎಳನೀರನ್ನು ವಿಶೇಷವಾಗಿ ಅರ್ಪಿಸುವ ಬಜರಂಗಿ ದೇವಸ್ಥಾನವನ್ನು ನೋಡಿಕೊಂಡು  ಕಟೀಲು ಕಡೆ ನಡೆದೆವು.

 ನಂದಿನಿ ನದಿಯ ತಟದಲ್ಲಿರುವ ಕಟೀಲು ದುರ್ಗಾ ಪರಮೇಶ್ವರಿ  ದೇವಸ್ಥಾನಕ್ಕೆ  ಮಳೆಯ ಮದ್ಯೆ ಬಂದು ತಲುಪಿದಾಗ ಸಂಜೆ ಆರು ಗಂಟೆಯಾಗಿತ್ತು. ದೇವಸ್ಥಾನದ ರೂಮ್ ಪಡೆದು ದರ್ಶನ ಪ್ರಸಾದ ಮಾಡಿ ಮಲಗಿ,ಮರುದಿನ ಬೆಳಿಗ್ಗೆ ನಾಲ್ಕುವರೆಗೆ ಎದ್ದು ಅಂದು ಸಮುದ್ರ ಸ್ನಾನ ಇದ್ದುದರಿಂದ  ಬ್ರೆಷ್ ಅಷ್ಟೇ ಮಾಡಿಕೊಂಡು ಕೆಳಗಿಳಿದು ಬಂದು ಮಂಗಳೂರ ಕಡೆಗೆ ಪಯಣ ಬೆಳೆಸಿದೆವು.

ಇಪ್ಪತ್ತೆರಡನೇ ತಾರೀಖು ಮುಂಗಾರು ಅರಬ್ಬೀ ಸಮುದ್ರದ ಕರಾವಳಿಗೆ ಅಪ್ಪಳಿಸುವುದಿತ್ತು. ಅದಕ್ಕೇ ಮುಂಗಡವಾಗಿ ಮಳೆ ಶುರುವಾಗಿತ್ತು. ಮಳೆ ಸಾಧಾರಣವಾಗಿ ಬೀಳುತ್ತಿತ್ತು. ಚಳಿಗಾಳಿಯ ಮದ್ಯೆ ಗಾಳಿಯೂ ರಭಸವಾಗಿ ಬೀಸುತ್ತಿತ್ತು.  ಎಲ್ಲಿಯೂ ನಿಲ್ಲಿಸದೇ ನೇರವಾಗಿ ಕಾಸರಗೋಡು ರಸ್ತೆಯ  ಹಿಡಿದೆವು.ಚೆಕ್ ಪೋಸ್ಟ್ ದಾಟಿ ಕೇರಳಕ್ಕೆ ಪ್ರವೇಶ ಪಡೆದೆವು. ಏಳುವರೆ ಎಂಟರ ಸಮಯ ಹೊಟ್ಟೆ ಏನಾದರೂ ಮೇವು ಬಯಸುತ್ತಿದೆ.  ಅದು ಪೂರಾ ಕೇರಳ ಯಾವುದೋ ಹೈವೇ ಪಕ್ಕದ ಒಂದು ಸಣ್ಣ ಹೋಟೆಲ್ ಬಳಿ ನಿಲ್ಲಿಸಿದೆ.ಕಡಲತೀರದ ಊರಿನ ಮುಂಗಾರು ಗಾಳಿಗೆ ಹೊಟ್ಟೆಯ ಹಸಿವು ತೀವ್ರವಾಗಿತ್ತು. ಅದು ಸಂಪೂರ್ಣವಾಗಿ ಕೇರಳ ಶೈಲಿಯ ತಿನಿಸುಗಳು ಅಲ್ಲಿದ್ದವು.  ಅವುಗಳ ವಿಶೇಷವೆಂದರೇ ಕೊಬ್ಬರಿ ಎಣ್ಣೆಯಿಂದಲೇ ಕರಿದ  ಪದಾರ್ಥಗಳಾಗಿದ್ದು ಕೊಬ್ಬರಿಯನ್ನೇ ಹೆಚ್ಚಾಗಿ ಬಳಸಿದ್ದ ತಿನಿಸುಗಳು.ಐದು ಜನಕ್ಕೆ ಬೇಕಾದ ತಿನಿಸುಗಳನ್ನು ತಿಂದೆವು. ಹೆಸರುಕಾಳು ಮೊಳಕೆಗಳು,ಪುಟ್ಟು, ಇಡ್ಲಿ ವಡ ಹೀಗೆ ಎಂಟತ್ತು ಐಟಂಗಳನ್ನು ತೆಗೆದುಕೊಂಡೆವು. ಕಾಫಿ ಯನ್ನೂ ಕುಡಿದೆವು.ಬಿಲ್ ಎಷ್ಟಾಯಿತೆಂದು ಕೇಳಿದರೆ ತೊಂಭತ್ತೈದು ರೂ ಆಗಿತ್ತು.! ಕನ್ನಡ ಅವರಿಗೆ ಗೊತ್ತಿತ್ತು ನಾನು ಪುನಃ ಹೇಳಿದೆ ಎಲ್ಲರದ್ದೂ ಸೇರಿ ಅಂತ ಹೌದು ನಾವು ತೆಗೆದುಕೊಂಡ ಐಟಂ ಹೆಸರುಗಳ ಹೇಳಿ ಇಷ್ಟೇ ಅಲ್ಲವಾ ತೆಗೆದುಕೊಂಡಿದ್ದು ತೊಂಭತ್ತೈದು ಎಂದ.ಅಷ್ಟು ಐಟಂ ನಮ್ಮ ಕರ್ನಾಟಕದಲ್ಲಿ ಸಿಗುತ್ತಿರಲಿಲ್ಲವಾದರೂ ಯಾವ ಹೋಟೆಲ್ ಲಿ ತಿಂದಿದ್ದರೂ ಕನಿಷ್ಠ ಮುನ್ನೂರ ಐವತ್ತು ಆಗಿರುತ್ತಿತ್ತು. ಖುಷಿಯಾಗಿ ನೂರು ರುಪಾಯಿಕೊಟ್ಟು ಉಳಿದ ಐದು ವೈಟರ್ಗೆ ಕೊಡಲೇಳಿದೆ. ಹಾಗೆ ಇಲ್ಲಿ ಒಳ್ಳೆಯ ಬೀಚ್ ಯಾವುದಿದೆ ಮಕ್ಕಳು ಆಡಲಿಕ್ಕೆ ಎಂದು ಆ ಕ್ಯಾಷಿಯರ್ ಗೆ ಕೇಳಿದರೆ ಸಮುದ್ರ  ತುಂಬಾ ಜೋರು ಉಂಟು ಸಮುದ್ರಕ್ಕೆ ಇಳಿಬೇಡಿ ತುಂಬಾ ಡೇಂಜರ್ ಮಾರ್ರೆ  ಎಂದನು. ಸಮುದ್ರದಲ್ಲಿ ಆಡಲೇಬೇಕೆಂದು ಸ್ನಾನ ಮಾಡದೇ ಇರುವ ನಮಗೆ ಅವನ ಹೇಳಿಕೆ ನಮಗೆ ನಿರಾಸೆಯನ್ನುಂಟು ಮಾಡಿತು. ಇರಲಿ ಬಿಡಿ ಎಂದು ಕಾಸರಗೋಡು ಕಡೆಗೆ ಬರುತ್ತಿದ್ದಾಗ  To beach  ಎಂದು ಬಾಣದ ಗುರುತು ನೋಡಿ ಎಷ್ಟು ದೂರ ಎಂದು ಕೇಳಿದರೆ ಒಂದು ಕಿಮೀ ಎಂದರು. ತಡಮಾಡದೇ ಅತ್ತ ಕಡೆ ತಿರುಗಿಸಿ ಕ್ಷಣಾರ್ಧದಲ್ಲಿ ಬೀಚ್ ಮುಟ್ಟಿದೆವು.

  ಸುಮಾರು ಎಂಟು ಗಂಟೆಯಾಗಿರಬಹುದು.  ನಿರ್ಜನ ಪ್ರದೇಶದ ಸಮುದ್ರ ತೀರಕ್ಕೇ ಅಂದು ಆ ಸ್ಥಳಕ್ಕೆ ಬೇಟಿಕೊಟ್ಟವರು ನಾವೇ ಮೊದಲಿಗರು.ಎತ್ತರವಾಗಿ ಬೆಳೆದ ತೆಂಗಿನ ಮರಗಳು.ಬೀಚ್ ಡ್ರೆಸ್ ಗಳ ಹಿಡಿದು ಹತ್ತಿರಹೋದರೆ ಹಾಲಿನ ನೊರೆಯಂತೆ ಉಕ್ಕಿ ಬರುತ್ತಿದ್ದ ನಾಲ್ಕೈದು ಅಡಿಗಳ ಕಡಲ ಅಲೆಗಳ ಅಬ್ಬರ. ನಿರ್ಜನ ಪ್ರದೇಶ. ಗಾಳಿ ಅಧಿಕ ಇದ್ದುದು ಮತ್ತು ಕೆಲವೇ ಗಂಟೆಗಳಲ್ಲಿ  ಮಾನ್ಸೂನ್ ಮಾರುತಗಳು ಅಪ್ಪಳಿಸಬೇಕಾಗಿದ್ದರಿಂದ ಸಮುದ್ರ ಪ್ರಕ್ಷುಬ್ಧವಾಗಿತ್ತು.ಆ ಅಲೆಗಳನ್ನು ನೋಡಿದ ಮೇಲೆ ನಿರ್ಜನ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ ಎಂದೆನಿಸಿತು. ಕಡಲಿಗಿಳಿಯಬೇಡಿ ಎಂದು ನಾನು ಹೇಳಿದ ಮಾತು ಯಾರಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಪರಿಸ್ಥಿತಿ ಮತ್ತೆ ಮತ್ತೆ ಹೇಳಿದಾಗ ಕೊನೆಗೆ ಮೊಣಕಾಲು ವರೆಗಿನ ನೀರಲ್ಲಿ ಅಷ್ಟೇ ಆಡಿ ಎಂದು ಅಷ್ಟರಲ್ಲೇ ಸುಮಾರು ಹೊತ್ತು ಆಡಿ ಎಲ್ಲರೂ ಮರಳು ತೋಡಿ ಮರಳಿನ ಮನೆಯಕಟ್ಟಿ  ಯಾವಾಗಲಾದರೂ ಒಮ್ಮೆ ಬರುವ ದೊಡ್ಡ ಅಲೆಗಳಿಗೆ ಕೊಚ್ಚಿಹೊದಾಗ ಬೇಸರವಾಗಿ ಪುನಃ ಕಟ್ಟಿ ಕಟ್ಟಿ ಮರಳಲೆಲ್ಲಾ ಓಡಾಡಿ  ಪುನಃ ಹೊಟ್ಟೆಯ ಹಸಿವು ಶುರುವಾಗಿತ್ತು. 

ಆಗ ಸಿಹಿನೀರಿನ ಬಾತ್ ರೂಂ ಹುಡುಕಿ ಎಲ್ಲರೂ ಸ್ನಾನ ಮಾಡಿ ಪ್ರೆಶ್ ಆಗಿ ಮತ್ತೆ ಹೈವೇ ಬಂದೆವು. ನಾವು ಹೋಗಬೇಕಾಗಿದ್ದ  ಬೇಕಲ್ ಕೋಟೆ ಇಪ್ಪತ್ತು ಕಿಮೀ ಇರಬಹದು.  ಹನ್ನೊಂದು ವರೆ ಸುಮಾರಿಗೆ  ಕೆಲವು ಸ್ನಾಕ್ಸ್ ಹಿಡಿದು ನಮ್ಮ ಬಹುದಿನದ ಬೇಡಿಕೆಯ ಕನಸಿನ ಬೇಕಲ್ ಕೋಟೆಯ ಎಂಟ್ರೆಸ್ಗೆ ಬಂದೆವು.

ಕಡಲತೀರದ ಜಂಬಿಟ್ಟಿಗೆಯಿಂದ ಕೋಟೆಯ ಕಟ್ಟಿರುವುದು. ಸುತ್ತಲೂ ಆಳವಾದ ಕಂದಕ ಇದ್ದು  ಇದನ್ನು  ನಮ್ಮ ಕೆಳದಿಯ ಅರಸರಾದ ವೆಂಕಟಪ್ಪ ನಾಯಕ ಮತ್ತು ಪೂರ್ಣಗೊಳಿಸಿದವರು ಶಿವಪ್ಪ ನಾಯಕ. ಸಮುದ್ರಕ್ಕೆ ಹೊಂದಿಕೊಂಡೇ ಇದ್ದ ಇದ್ದು   ನಯನ ಮೋಹಕವಾದ ಕೋಟೆ.ನಂತರ ಹೈದರ್ ಟಿಪ್ಪುವಿನ ವಶವಾದ ಇದು ನಾಲ್ಕನೇ ಆಂಗ್ಲೋ ಮೈಸೂರು ಯುದ್ದದ ನಂತರ ಬ್ರಿಟಿಷ್ ವಶವಾಗುತ್ತದೆ. ಇತಿಹಾಸ ಏನೇ ಇದ್ದರೂ ವೀಕ್ಷಣಾ ಗೋಪುರದಲ್ಲಿ ನಿಂತರೆ ಅರಬ್ಬೀ ಸಮುದ್ರದ ಅಲೆಗಳು ಮುಖಕ್ಕೆ ರಾಚುತ್ತವೆ.ಇದನ್ನು ಪ್ರತಿಯೊಬ್ಬರೂ ನೋಡಲೇಬೇಕು. ಸುಮಾರು ಐವತ್ತು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಾಣವಾದ ಇದು ನೂರಾರು ಫಿಲಂ ಶೂಟಿಂಗ್, ಹದಿಹರೆಯದ ಯುವಕ ಯುವತಿಯರಿಗೆ,ಚಿತ್ರ ಕಲಾವಿದರಿಗೆ, ಪೋಟೋ ಗ್ರಾಪರ್ಸಗಳಿಗೆ, ಏಕಾಂಗಿಗಳಿಗೆ ಹೀಗೆ ಪ್ರತಿಯೊಬ್ಬರಿಗೂ ಹೇಳಿ ಮಾಡಿಸಿದ ಕೋಟೆ ಎಂದೇ ಹೇಳಬಹುದು. ಅಲ್ಲಲ್ಲಿ ದುಂಡನೆಯ ದೊಡ್ಡದಾದ ಬತೇರಿ ವೀಕ್ಷಣಾ ಗೋಪುರದಿಂದ ಮೇಲೆ ನಿಂತು ವಿಶಾಲ ನೀಲಿ ಸಮುದ್ರದ ವಿಹಂಗಮ ನೋಟ ನೋಡುತ್ತಿದ್ದರೆ  ಅದು ನಾನು ಕಂಡಂತೆ ಬೇರೆಲ್ಲೂ ಈ ಎಂಜಾಯ್ಮೆಂಟ್ ಸಿಗಲ್ಲ.  ಬಿಸಿಲು ಕೆಲವೊಮ್ಮೆ ದಟ್ಟವಾದ ಮೋಡಕವಿದು ಯಾವಾಗಬೇಕಾದರೂ ಮಳೆ ಸುರಿಸಬಹುದಾದ  ಬಿಸಿಲು ಮೋಡದ ಚೆಲ್ಲಾಟದ ನಡುವೆ ನೂರಾರು ಸ್ವಂತಿಕೆಯ ಪೋಟೋಗಳು ತೆಗೆದುಕೊಂಡು ಮನೊಲ್ಲಾಸವಾಗಿ ಇಳಿದು ಬರುತ್ತಿರುವಾಗ ಕೆಟ್ಟು ಹೊಟ್ಟೆ ಹಸಿವಾಗಿತ್ತು.  ಹಾಗೆ ಇದು  ದೇವರ ನಾಡು ಕೇರಳದ ಅತೀ ದೊಡ್ಡ ಕೋಟೆಯಾದ್ದರಿಂದ ಆರ್ಕ್ಯಾಲಾಜಿ ಇಲಾಖೆಯವರು ಉತ್ತಮವಾಗಿ ನಿರ್ವಹಣೆಯ ಮಾಡಿದೆ. ಸಾಧ್ಯವಾದರೆ ಅಕ್ಟೋಬರ್ ನವೆಂಬರ್‌ನಲ್ಲಿ ನೋಡುವುದು ಇನ್ನೂ ಸುಂದರವಾಗಿರುತ್ತದೆ.

ಲೇಖನ ಮುಗಿಸುವ ಮುನ್ನ ಸುಮಾರು ಮೂರು ಗಂಟೆಗಳಿಗೂ ಅಧಿಕ ಸಮಯ ಬೇಕಲ್ ಕೋಟೆಯಲ್ಲಿ ಕಳೆದ ನಮಗೆ ಅದೊಂದು ಅದ್ಬುತ ನೆನಪಾಗಿ ಉಳಿದಿದೆ. ತೀವ್ರ ಮೋಡ ಮಳೆ,ಮಳೆಗಾಳಿ ಇದ್ದುದರಿಂದ  ಇನ್ನೊಮ್ಮೆ ಯಾವಾಗಲಾದರೂ ಬರುವ ಎಂದು 'ಮನ್ನಾರ್' ವರೆಗಿನ ನಮ್ಮ ಪಯಣ ಮೊಟಕುಗೊಳಿಸಿ ಮಂಗಳೂರು ಕಡೆಗೆ ಹಿಂತಿರುಗಿ ಬರುವಾಗ ಕಾಸರಗೋಡಿನ ಯಾವುದೋ ಒಂದು ತಳ್ಳುವ ಅಂಗಡಿಯಲ್ಲಿ ಬಂಗಡೆ ಮೀನನ್ನು ಪ್ರೈ ಮಾಡಿ ಮಾರುತ್ತಿದ್ದರು. ಮೂಗಿಗೆ ವಾಸನೆ ಬಡಿದು ಮೂರು ಗೀ ರೈಸ್ ಮತ್ತು ಹದಿನೈದು ಇಪ್ಪತ್ತು ಒಳ್ಳೆ ಬಂಗಡೆ ಪ್ರೈ  ಪ್ಯಾಕ್ ಮಾಡಿಸಿಕೊಂಡು ರಸ್ತೆಯ ಪಕ್ಕ ಮಳೆಯ ಹನಿಗಳ ಜೊತೆಗೆ ಊಟ ಮಾಡಿದೆವು. ಅಂದ ಹಾಗೆ ಒಂದು ಬಂಗಡೆ ಮೀನಿನ  ಬೆಲೆ ಹತ್ತು ರುಪಾಯಿ ಆಗಿತ್ತು. ಮತ್ತೊಮ್ಮೆ ಹೋಗುವ ಯೋಜನೆ ಇದೆ. ಈ ಕೋವಿದಮ್ಮಳ ವಿಮೋಚನೆ ಆದರೆ ಹೋಗುವೆವು.

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

  1. ನಿಮ್ಮ ಲೇಖನಗಳು ಉತ್ತಮ ಸಾಹಿತ್ಯ ಅಭಿರುಚಿ ಯನ್ನು ಉಂಟು ಮಾಡುತ್ತವೆ super sir ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ
  2. ಪ್ರವಾಸ ಸಾಹಿತ್ಯ ಓದುವುದೆ ಒಂದು ಅದ್ಭುತ ಅನುಭವ.‌ ತಮ್ಮಿಂದ ಇಂತಹ ಇನ್ನೂ ಅನೇಕ ಪ್ರವಾಸ ಸಾಹಿತ್ಯ ಉಗಮಿಸಲಿ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಬರವಣಿಗೆ ಶೈಲಿ ಅದ್ಭುತ ಸರ್, ಓದುತ್ತಾ ಹೋದಂತೆ ನಾವೇ ಬೇಕಲ್ ಕೋಟೆಗೆ ಪಯಣಿಸುತ್ತಿದ್ದೇವೆ ಅನ್ನೋ ಭಾಸವಾಗುತ್ತದೆ

    ಪ್ರತ್ಯುತ್ತರಅಳಿಸಿ
  4. ನಿಮ್ಮ ಬರವಣಿಗೆ ಶೈಲಿ ಅದ್ಭುತ ಸರ್, ಓದುತ್ತಾ ಹೋದಂತೆ ನಾವೇ ಬೇಕಲ್ ಕೋಟೆಗೆ ಪಯಣಿಸುತ್ತಿದ್ದೇವೆ ಅನ್ನೋ ಭಾಸವಾಗುತ್ತದೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಪ್ರೀತಿಯ ನುಡಿಗಳಿಗೆ ಧನ್ಯವಾದಗಳು.. ಬಿಡುವಿನಲ್ಲೂ ಬಿಡುವುಮಾಡಿಕೊಂಡು ಲೇಖನ ಓದಿದ್ದಕ್ಕೇ ತುಂಬಾ ಥ್ಯಾಂಕ್ಸ್ ಸಾರ್... ನಿಮ್ಮ ಸಹಕಾರ ಹೀಗೆ ಇರಲಿ..

      ಅಳಿಸಿ
  5. ಬೇಕಲ್ ಕೋಟೆಗೆ ನಿಮ್ಮ ಪಯಣ ಲೇಖನ ಚೆನ್ನಾಗಿದೆ ಸರ್. ಪ್ರವಾಸದ ದಾರಿಯಲ್ಲಿ ನಿಮ್ಮ ಅನುಭವಗಳು ನಮ್ಮನ್ನು ಸಹ ಪ್ರಯಾಣಿಕರನ್ನಾಗಿಸಿದೆ.

    ಪ್ರತ್ಯುತ್ತರಅಳಿಸಿ
  6. ಪ್ರತ್ಯುತ್ತರಗಳು
    1. ನಮ್ಮೊಟ್ಟಿಗೆ ನೀವು ಪಯಣಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.. ಸದಾ ಹೀಗೆ ಇರಲಿ..

      ಅಳಿಸಿ
    2. ನಮ್ಮೊಂದಿಗೆ ನೀವು ಪಯಣಿಸಿದ್ದು ನನಗೆ ಇನ್ನೂ ಖುಷಿ ಆಯಿತು ಸದಾ ಹೀಗೆ ಇರಲಿ...

      ಅಳಿಸಿ
  7. ಪ್ರತಿವರ್ಷವು ಮಲೆನಾಡ ಸೊಬಗಿನ ಸೌಂದರ್ಯನ ಸವಿಯಲು ನಾವು ಈ ಜಾಗಗಳೆಲ್ಲವನ್ನೂ ಸಹ ವೀಕ್ಷಿಸುತ್ತೇವೆ ಅತಿಸುಂದರ ನಿಮ್ಮ ಪ್ರಯಾಣ ಇನ್ನು ಮುಂದೆ ಹೀಗೆ ಸಾಗಲಿ ನಿಮ್ಮ ಬರವಣಿಗೆಯೂ ಬಹಳ ಅದ್ಭುತ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಪ್ರೀತಿಯ ಹಾರೈಕೆಯ ನುಡಿಗಳಿಗೆ ಧನ್ಯವಾದಗಳು.. ನೀವೆಲ್ಲರೂ ನಮ್ಮ ಜೊತೆಯಿರುವಾಗ ದಣಿವಿರದ ಪಯಣ ನನ್ನದು.. ಸದಾ ಹೀಗೆ ಇರಲಿ..

      ಅಳಿಸಿ
  8. ನಿಮ್ಮ ಬರವಣಿಗೆ ಮಾತುಗಳು ಬರುವುದಿಲ್ಲ ಸರ್ great

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಈ ವಾಕ್ಯಕ್ಕೆ ನನಗೂ ಮಾತು ನಿಂತೋಯ್ತು ಮಾರ್ರೆ.. ಬಹಳ ದೊಡ್ಡಮಾತು ನಾನು ಋಣಿ...

      ಅಳಿಸಿ
    2. ನಿಮ್ಮ ಈ ಅನುಭವದ ಹೊಂಗಿರಣ ನಮ್ಮ ಕಣ್ಣಮುಂದೆಯೇ ಉಟ್ಕತವಾಗಿ ದರ್ಶನವಾಗಿದೆಯೇನೋ ಎಂಬಂತೆ ಧ್ವನಿಮಾ ಚಿತ್ರೀತವಾಗಿದೆ, ನಿಮ್ಮ ಧ್ವನಿಪೂರ್ಣವಾದ ಈ ಬರವಣಿಗೆ ತುಂಬಾ ಸಹೃದಯೀ ಯರನ್ನು ಸೆಳೆಯುವಂತಿದೆ ಸರ್

      ಅಳಿಸಿ
    3. ನಿಮ್ಮ ಹೃನ್ಮನ ಪೂರಕವಾದ ಪ್ರೀತಿಪೂರಕ ಮಾತುಗಳಿಗೆ ನಾನು ಋಣಿ. ಏನೋ ಸಾಧ್ಯವಾದಷ್ಟು ದ್ವನಿಮಾ ಚಿತ್ರಣ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ಎಲ್ಲಿಯಾದರೂ ಅಸ್ಪಷ್ಟವಾಗಿ ಇದ್ದರೆ ದಯಮಾಡಿ ಗಮನಕ್ಕೆ ತನ್ನಿ ಮಾರ್ಗದರ್ಶನ ಮಾಡಿ..

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..