ಸರ್ರಾ ಸಣ್ಣದಾ ದೊಡ್ಡದಾ??

ಸರ್ರಾ ಸಣ್ಣದಾ ದೊಡ್ಡದಾ??

 ಎರಡು ಸಾವಿರದ ಎಂಟನೇ ಇಸವಿ. ನಾನು ಅಧ್ಯಾಪನಾ ವೃತ್ತಿಗೆ ಸೇರಿದ ಹೊಸತರಲ್ಲಿ ಸಂಡೂರು ತಾಲ್ಲೂಕಿನ ಉಬ್ಬಲಗಂಡಿ ರಾಜಾಪುರ ಅಲ್ಲೇ ವಾಸ  ಮತ್ತು ಕರ್ತವ್ಯ.ನಿರುದ್ಯೋಗ ಇರುವಾಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಬೇಕಾದರೂ ಕೆಲಸ ಮಾಡಬಲ್ಲೇ ಎಂದು ಸುಲಭ ಮತ್ತು ಆತ್ಮವಿಶ್ವಾಸ ದಿಂದ ಹೇಳುತ್ತಿದ್ದ ಆ ಮಾತು ಆ ರಾಜಾಪುರದಲ್ಲಿ ಜೀವನ ಮಾಡಲು ಹೋದಾಗ ತುಸು ಕಷ್ಟ ಅನಿಸಿತು.   ನನಗಿಂತಲೂ ಆರು ತಿಂಗಳ ಮೊದಲು ಸೇವೇಗೆ ಸೇರಿದ್ದ ಮೌನೇಶ ಮತ್ತು ಸತೀಶ  ಒಂದು ಸಣ್ಣ ಜನತಾ ಮನೆಯಲ್ಲಿ  ಇದ್ದರು. ನಾನು ಮಾರ್ಚ್ ತಿಂಗಳಲ್ಲಿ ಜಾಯಿನ್ ಆದ್ದರಿಂದ ಏಪ್ರಿಲ್ ಹದಿನಾಲ್ಕರ ವರೆಗೆ ಅದೇ ಶಾಲೆಯ ಮುಖ್ಯಗುರುಗಳಾಗಿದ್ದ ರಂಗಪ್ಪ ಚಲವಾದಿ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ಅವರು ಆಗ ಕೆಲವು ದಿನಗಳವರೆಗೆ ಮ್ಯಾರಿಡ್ ಬ್ಯಾಚುಲರ್ ಆಗಿದ್ದರಿಂದ ಅಡುಗೆ ಮಾಡಲು ಅವರಿಗೆ ಮನಸು ಮತ್ತು ಮೈ ಬಗ್ಗದೇ ಇದ್ದದ್ದು,ಆಗತಾನೆ ಹೋದ ನನಗೂ ಆಶ್ರಯ ಸಿಕ್ಕಿದ್ದೂ ಇಬ್ಬರಿಗೂ ಪ್ಲಸ್ ಆಗಿ ಅನುಕೂಲ ಆಗಿತ್ತು.

ಇಡೀ ಗ್ರಾಮದಲ್ಲಿ ಒಂದು ಮನೆಯೂ ಶೌಚಾಲಯವಿಲ್ಲದ   ಊರು.ಹಳ್ಳಿಯವರಾದ ನಾವೂ ಬೆಳಿಗ್ಗೆ ಡಬ್ಬಿಯೋ/ಚೆಂಬೋ  ಹಿಡಿದುಕೊಂಡು ಬಯಲು ಶೌಚಕ್ಕೆ ಹೋಗುವುದು ಅಭ್ಯಾಸ ಇತ್ತು. ಹೀಗೆ ಒಂದು ದಿನ ಹೊರಗೆ ಹೋದಾಗ  ಸತೀಶ ಮಾಸ್ಟರ್ ಅವರನ್ನು ನೋಡಿ  ನಾಗರಾಜ ಎಂಬ ಅದೇ ಊರಿನ ವ್ಯಕ್ತಿ ಕಿಲ ಕಿಲ ಅಂತ ನಗುತ್ತಾ ಇದ್ದ. ಅದೇ ಸಮಯಕ್ಕೇ ನಾನು ರಂಗಪ್ಪ ಮಾಸ್ಟರ್ ಅಲ್ಲಿಗೆ ಹೋದೆವು.ಆ ನಗಾಡುತ್ತಿದ್ದ ವ್ಯಕ್ತಿಯ ನೋಡಿದ ರಂಗಪ್ಪ

" ಏಯ್ ಡಬ್ಬಿ ಯಾಕೋ ಬೆಳಗಾ ಮಂಜಾನೆ ನಗಕತ್ತೀಯಾ ಏನಾತು" ಅಂದರು.

ಡಬ್ಬಿನಾಗರಾಜ:  "ನೀವೂ ಬಂದ್ರೇನ್ ಸಾರ್ ನೋಡ್ರಲ್ಲಿ ನಿಮ್ ಮಾಸ್ತರ  ಸಂಡಾಸಿಗೆ ಬಕೆಟ್ ಅಲ್ಲಿ ನೀರು ತಗಂಡು ಬಂದಾರ ನಗದೇ ಏನ್ ಮಾಡಬೇಕ್ರೀ ಸರ್ರ. ಜಳಕ ಮಾಡಾಕೋ ಹೋಗ್ತಾರೋ ಸಂಡಾಸಿಗೆ ಹೊಂಟಾರ್ರೋ ತಿಳಿಯವಲ್ದು" ಅಂದ.

ರಂಗಪ್ಪ: "ಏಯ್ ಡಬ್ಬಿ ಸುಮ್ಮನೆ ಹೋಗೋ ನಿನ್ನ ಅವರದೂ ಉಡುಪಿ ಇಲ್ಲೀ ತರ ಚಂಬು ಹಿಡಿದು ಹೋಗೋದು ಗೊತ್ತಿಲ್ಲ ಅವರಿಗೆ ಅಭ್ಯಾಸನೂ ಇರಂಗಿಲ್ಲ ಹೋಗೋ ಸುಮ್ಮನೇ" ಎಂದು ಗದರಿಸಿದರು.

 ನೋಡಿದರೆ ಈ ಮೌನೇಶ ಮಾಸ್ಟರ್  ಒಂದು ಪ್ಲಾಸ್ಟಿಕ್ ಚೆಂಬು ಹಿಡ್ಕೊಂಡಿದ್ದರೆ  ಈ ಸತೀಶ ಒಂದು  ಸಾಧಾರಣಾ ಬಕೆಟ್ ಅಲ್ಲಿ ಸುಮಾರು ಹತ್ತು ಲೀಟರ್ ನೀರು ಹಿಡಿದು ಹೋಗುತ್ತಿದ್ದರು.ಹೌದು ಅವರಿಗೆ ಬಯಲು ಶೌಚಾಲಯ ಬಳಸಿ ಅಬ್ಯಾಸ ಇಲ್ಲದೇ ಇದ್ದುದರ ಪರಿಣಾಮ ಹಾಗೆ ಆಗಿತ್ತು. ಅಲ್ಲಿ ಸಂಜೆಯ ವೇಳೆ ಸಾಮಾನ್ಯವಾಗಿ ಕರೆಂಟ್ ಇರ್ತಾ ಇರಲಿಲ್ಲ.ಯಾವಾಗ ಬರುತ್ತಿತ್ತೋ ಅದು ಗೊತ್ತಿರಲಿಲ್ಲ. ಆ ಸೆಕೆಗೆ ನಾವೆಲ್ಲರೂ ಸೇರಿ ಹರಟೆಹೊಡೆಯತ್ತಿರುವಾಗ ಈ  ನಾಗರಾಜ ಎಂಬ ವ್ಯಕ್ತಿಯೂ ವಾರದಲ್ಲಿ ಎರಡ್ಮೂರು ದಿನ ನಮ್ಮೊಂದಿಗೆ ಸೇರಿ ವಟಾ ವಟಾ ಎಂದು ಮಾತುಗಳಿಗೆ ತಲೆ ಬುಡ ಇಲ್ಲದೆ  ತಮಾಷೆಯಾಗಿ ಮಾತಾಡುತ್ತಿದ್ದ.ನಾನು ಡಬ್ಬಿ ಎನ್ನುವುದು ಅವರ ಮನೆತನದ ಹೆಸರೇನೋ ಅಂತ ಭಾವಿಸಿದ್ದೆ. ಆದರೆ ನಿಜವಾಗಲೂ  ಅವರು ಖಾಲಿ ಡಬ್ಬದಲ್ಲಿ ಕಲ್ಲು ಹಾಕಿ ಅಲ್ಲಾಡಿಸಿದಂತೆ ಮಾತಾಡುತ್ತಿದ್ದರಿಂದ  ಈ ರಂಗಪ್ಪ ಮಾಸ್ಟರ್ 'ಡಬ್ಬಿ' ಎಂದು ನಾಗರಾಜ ಎನ್ನುವ  ಹೆಸರಿಗೆ   Prefix ಪಿಕ್ಸ್ ಮಾಡಿದ್ದರು.ಅಂದಿನಿಂದ ನಾನೂ  ಅವರನ್ನು 'ಡಬ್ಬಿ'ಎಂಬ ಹೆಸರಿನಿಂದಲೇ ಗುರುತಿಸುತ್ತಿದ್ದೆವು

 ಜೂನ್ ತಿಂಗಳಲ್ಲಿ ನಾನು ಸತೀಶ,ಮೌನೇಶ  ಒಂದೇ ಜನತಾಮನೆ ಮಾಡಿ  ಸೀಮೆ ಎಣ್ಣೆ ಸ್ಟೌವ್ ನಿಂದ ಅಡುಗೆ ಮಾಡಿಕೊಂಡು ಊಟಮಾಡುತ್ತಿದ್ದೆವು. ಕೆಲವು ದಿನಗಳಾದ ನಂತರ ಮೌನೇಶ ಪಕ್ಕದಲ್ಲೇ ಮಂಜುನಾಥ ಎಂಬುವರ ಜೊತೆಗೂಡಿ ಇನ್ನೊಂದು ರೂಂಗೆ ಶಿಪ್ಟ್ ಆದರು.

ಕರಾವಳಿಯ ಅಹಾರ ಪದ್ದತಿಗೂ ಬಳ್ಳಾರಿ ಯ ಅಹಾರ ಪದ್ದತಿಗೂ ಅಜಗಜಾಂತರ ವ್ಯತ್ಯಾಸ ಉಂಟು.ಅವರಿಗೆ ರೊಟ್ಟಿಯನ್ನು ಅಗಿದು ತಿನ್ನಲಾಗುವುದಿಲ್ಲ. ನಮ್ಮ ರಾಗಿ ಮುದ್ದೆಯನ್ನು ಕೊಟ್ಟರೆ   ದುಂಡಾಗಿನ ಮುದ್ದೆಯ ಎತ್ತಲಿಂದ ಮೊದಲು ಮುರಿಯುವುದೋ ಎಂದು ನೋಡುತ್ತಿರುತ್ತಾರೆ. ಅಪ್ಪಿ ತಪ್ಪಿ ಮುರಿದು ಬಾಯಿಗೆ ಹಾಕಿದ್ರೆ ಅದನ್ನು ನುಂಗಲು ಬಾರದು. ಮೀನು ಮಾತ್ರ ಚೆನ್ನಾಗಿಯೇ ತಿನ್ನುವುದು ಗೊತ್ತಿತ್ತು.

ಸ್ವಲ್ಪ ಮಟ್ಟಿಗೆ ಅಡುಗೆ ಬರುತ್ತಿತ್ತು ನನಗೆ. ಸಾದಾರಣ ಎಲ್ಲಾ ಅಡುಗೆ ಮಾಡಲು ಬರುತ್ತಿದ್ದ ನನಗೆ ಅಲ್ಲೇ ಬೇಕಾದ ದಿನಸಿಯ ಕೊಂಡು  ಯಾವ ಯಾವುದೋ ಹೊಸ ಹೊಸ ವಿಧಾನದಲ್ಲಿ ಸಾರು ಮಾಡಿ ನಮಗೆ ಗೊತ್ತಿಲ್ಲದೆ ಹೊಸ ರುಚಿಗಳನ್ನು ಕಂಡುಕೊಂಡಿದ್ದೆವು.

ನಾವು ವಾಸ ಇದ್ದ ಸಣ್ಣ ಮನೆಯಲ್ಲಿ ಅಲ್ಲೊಂದು ಇಲ್ಲೊಂದು ಇಲಿಗಳೂ ಇದ್ದವು. ಯಾವಾಗಲಾದರೂ ಈ ಸತೀಶ ಇಲಿಗಳನ್ನು ನೋಡಿದರೆ ಹುಲಿಯನ್ನೆ ನೋಡಿದವರಂತೆ ಜೋರಾಗಿ ಕೂಗುತ್ತಿದ್ದರು.ಅಲ್ಲಿ ಕಬ್ಬಿಣದ ಅದಿರು ಹೆಚ್ಚು ಇದ್ದುದರಿಂದ ಕಲ್ಲು ಬಂಡೆಗಳು ಬಿಸಿಲಿಗೆ ಕಾದು ಶಾಖ ಹೆಚ್ಚಾಗಿ ಬೇಸಿಗೆಯಲ್ಲಿ ಬಿಸಿಲಾದರೆ ಚಳಿಗಾಲದಲ್ಲಿ ಈ ಕಲ್ಲು ಬಂಡೆಗಳು ತಂಪಾಗಿ ಚಳಿಯ ಪ್ರಮಾಣವೂ ಹೆಚ್ಚೇ ಇರುತ್ತಿತ್ತು. ಕೂಗುತ್ತಿದ್ದರು.ಒಂದು ದಿನ ನವೆಂಬರ್ ತಿಂಗಳ ಚಳಿಯ ರಾತ್ರಿ.  ಅಂದು ನಾನು ಸತೀಶ ಮಲಗಿದ್ದೆವು. ಮಧ್ಯರಾತ್ರಿ ಒಂದೊತ್ತಿನಲ್ಲಿ ನನಗೆ  ಎಚ್ಚರ ಆಯಿತು. ಕರೆಂಟ್ ಇರಲಿಲ್ಲ. ನನಗೆ ಬಾತ್ ರೂಂ ಗೆ ಹೋಗಬೇಕೆನಿಸಿ ಕುರುಡು ಬೆಳಕಿನ  ನೆಟ್ವರ್ಕ್ ಇಲ್ಲದ ಮೊಬೈಲ್‌ ಹಿಡಿದು ಹೋಗುತ್ತಿದ್ದೆ.ಬುಸ್ ಎನ್ನುವ ಶಬ್ದ. ಹಾವಿನ ಬಗ್ಗೆ ತುಂಬಾ ಪರಿಚಯ ಇದ್ದ ನನಗೆ ಅದು ಹಾವೇ ಎಂದು ಖಚಿತವಾಯಿತು.ಸತೀಶ್ ಮಲಗಿದ್ದಾನೆ. ಅವರನ್ನು ಎಂಥ ಎಬ್ಬರಿಸುವುದೆಂದು ತಿಳಿದು  ವಿವಿಧ ಉದ್ದೇಶಕ್ಕೆ ಬಳಸಲ್ಪಡುತ್ತಿದ್ದ ಪೋಲಿಸ್ ಲಾಠಿಯಂತಹ ಒಂದು ಕೋಲು ಸದಾ ಮನೆಯ ಮೂಲೆಯಲ್ಲಿ ಇರುತ್ತಿತ್ತು. ಅದನ್ನು ಎತ್ತಿ  ಅದನ್ನು ಹೊಡೆದು ಸಾಯಿಸಿದೆ. ಆ ಶಬ್ದಕ್ಕೆ ಎಚ್ಚರಗೊಂಡ ಸತೀಶ ಸರ್ರಾ #"ಸಣ್ಣದಾ ದೊಡ್ಡದಾ"?ಎಂದು ಕೇಳಿದರು. ಸಣ್ಣದು ಮಾರ್ರೆ ಹೆಬ್ಬೆರಳು ಗಾತ್ರದಷ್ಟಿದೆ ಎಂದೆ. ಅಷ್ಟು ಮಾತಾಡಿ ಮಲಗಿದರು. ನಾನು ಹಾವು  ಸತ್ತಿರುವುದ ಖಚಿತ ಪಡಿಸಿಕೊಂಡು ಅದನ್ನು ಬಡಿದ ಸ್ಥಳದಲ್ಲಿಯೇ ಬಿಟ್ಟು    ನಾನೂ ಮಲಗಿದೆ.

ಮುಂಜಾನೆ ನನಗಿಂತಲೂ  ಮೊದಲು ಎದ್ದು ಅತ್ತ ಹೋಗುವಾಗ ನೋಡಿದ ಸತೀಶ ಸತ್ತ ಹಾವನ್ನು ನೋಡಿ  "ಹೋಯ್ ಹಾವು ಹಾವು  ಬಂದಿದೆ ಮಾರ್ರೆ. ಸರ್ ಎದ್ದೇಳಿ ಎದ್ದೇಳಿ ಎಂದು ಜೋರಾಗಿ ಕಿರುಚುತ್ತಿದ್ದರು. ಇನ್ನೊಂದು ಹಾವು ಬಂದಿರಬೇಕು ಎಂದು ದಡಬಡ ಎದ್ದು ಒಳಗೆ ಓಡಿದ ನಾನು ಕೋಲು ಹಿಡಿದು ನೋಡಿದರೆ. ರಾತ್ರಿ ಬಡಿದಿದ್ದ ಸತ್ತ ಹಾವು! ಇತ್ತ ಸತೀಶ ಲುಂಗಿಯ ಸೊಂಟದವರೆಗೆ ಕಟ್ಡಿ ಬಾಗಿಲಲ್ಲಿ ನಿಂತಿದ್ದರು . ನಾನು ಅದನ್ನು ನೋಡಿ ಇದೇ ಕಣ್ರಿ ನಾನು ರಾತ್ರಿ ಹೊಡೆದದ್ದು. ನೀವು ಸಣ್ಣದಾ ದೊಡ್ಡದಾ ಅಂತ ಕೇಳಿದ್ರಿ ಅಂತ ಹೇಳಿದೆ. ಹೋಯ್  ಎಂಥ ಮಾರ್ರೆ ನೀವು ಹಾವು ಬಂದಿದೆಯೆಂದು ಹೇಳುವುದು ಬೇಡ್ವ? ನಾನು ಇಲಿ ಹೊಡೆದಿರಬೇಕು ಎಂದು ಅಂದುಕೊಂಡಿದ್ದೆ ಮಾರ್ರಾಯ ಎಂದು  ಅಂದರು.  ಅಷ್ಟೊತ್ತಿಗೆ ಅಕ್ಕ ಪಕ್ಕದ ಮನೆಯವ್ರೂ ಕೋಲು ಹಿಡಿದು ಮನೆಗೆ ಬಂದು ಬಗ್ಗಿ ನೋಡುತ್ತಿದ್ದರು. ಸಣ್ಣದು ಬಿಡಿ ರಾತ್ರಿನೇ ನಾನು ಹೊಡೆದಿದ್ದೆ ಈ ಮಾಸ್ಟರು ಈಗ ನೋಡಿ ಕೂಗಾಡಿದಾರೆ ಎಂದು ಅದನ್ನು ಹೊರಗೆ ತಳ್ಳಿದೆ. ಇತ್ತ ಸತೀಸನ ನೋಡಿದರೆ  ಗಾಬರಿಯಾಗಿ ಏದುಸಿರ ಬಿಡುತ್ತಾ ನಿಂತಿದ್ದರು.ನೀವು ಯಾಕ್ರಿ ಇಷ್ಟೊಂದು ಗಾಬರಿಯಾಗಿರುವಿರಿ ಎಂದು ಕೇಳಿದರೆ ಮನೆಲಿ ಹಾವು ಬಂದರೆ ಭಯ ಆಗೋದಿಲ್ಲವಾ ಮಾರಾಯ? ಎಂದರು. ನಾನು ಮಲೆನಾಡಿನವರು ಕರಾವಳಿಯವರು ಅಲ್ಲಿ ತುಂಬಾ ಕಾಡು ಇರತ್ತೆ. ಎಂಥೆಂಥವೊ ಹಾವೆಲ್ಲ ನೋಡಿರುತ್ತಾರೆ. ಹಾವುಗಳಿಗೆ ಎಲ್ಲ ನಮ್ ತರಹ ಹೆದರುವುದಿಲ್ಲ ಎಂದು ಅಂದುಕೊಂಡಿದ್ದೆ. ಆದರೆ ಬಯಲು ಸೀಮೆ ಜನಗಳಿಗಿಂತ ಇವರು ಹೆಚ್ಚಿಗೆ ಹೆದರುವರು.

ಲೇಖನ ಮುಗಿಸುವ ಮುನ್ನಾ ಕರಾವಳಿಯ ಸತೀಶ ರಾಗಿ ಮುದ್ದೆ ರೊಟ್ಟಿ ತಿನ್ನುವುದನ್ನು ಚೆನ್ನಾಗಿಯೇ ಅಬ್ಯಾಸ ಮಾಡಿಕೊಂಡಿದ್ದರು. ಹಾಗಾಗ್ಗ ಸೀಗಡಿ, ಕಡ್ಡೀ ಮೀನು ವಾಸನೆಯನ್ನೂ ತೋರಿಸುತ್ತಿದ್ದರು.ಆ ಸ್ಥಳ ಆಗ ಅಂಡಮಾನ್ ಗಿಂತಲೂ  ಇಂಟೀರಿಯರ್ ಇತ್ತು. ಕಾರು ಬೈಕ್ ಗಳಲ್ಲಿ ಹೋಗುವ ಹಾಗೆ ಇರಲಿಲ್ಲ. ಯಾಕಂದರೆ ಅವು  ಬಾವಿಗಳಂತಹ ರಸ್ತೆಗಳು. ಹದಿನೆಂಟು ಕಿಲೊಮೀಟರ್ ಪಯಣಿಸಲು ಎರಡು ಗಂಟೆ ಕುಣಿದೂ ಕುಣಿದು ಪಯಣಿಸಬೇಕಿತ್ತು. ಮೈನ್ಸ್ ಲಾರಿಗಳೇ ಲಕ್ಸೂರಿ ಪ್ರಯಾಣಿಕರ ವಾಹನಗಳು. ಆದರೆ ಈಗ ಮೊದಲಿನಂತಿಲ್ಲ. ರಸ್ತೆಗಳು ಬಹುವಾಗಿ ಸುಧಾರಿಸಿವೆ.
ಬ್ಯಾಚುಲರ್ ಲೈಪನ್ನು ದಿಲ್ದಾರ್ ಆಗಿ ಕಳೆದ ನಮಗೆ ಈ ಊರಿನ ನೆನಪುಗಳು ಸದಾ ಕಾಡುತ್ತಿವೆ.  ಸತೀಶ ಇಂದು  ತವರಿಗೆ ವರ್ಗಾಣೆಯಾಗಿದ್ದರೆ  ನಾನು ಸದ್ಯ ಅದೇ ತಾಲ್ಲೂಕಿನಲ್ಲಿ ಬೇರೊಂದು ಶಾಲೆಗೆ ವರ್ಗಾವಣೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.  ರಾಜಾಪುರದ  ಈ ಡಬ್ಬಿ ನಾಗರಾಜನೂ ಸೇರಿ ನೂರಾರು ಶಿಷ್ಯಕೋಟಿ ಸಾಮಾಜಿಕ ತಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದಾರೆ.ಸೇವೆ ಆರಂಭಿಸಿದ ಸ್ಥಳ ಯಾವಾಗಲೂ ನೆನಪಲ್ಲಿ ಸ್ಥಿರಸ್ಥಾಯಿಯಾಗಿರುತ್ತದೆ.
 ಸತಿ ಪತಿಯ ಮದ್ಯದಲ್ಲಿರುವ ಸತೀಶ

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

  1. ಸಣ್ಣದ ದೊಡ್ಡದ ಅಂತ ಸ್ಟಾರ್ಟ್ ಮಾಡಿ ಸೂಪರ್ ಎಂಡಿಂಗ್ ಕೊಟ್ಟಿದಿರಾ ಸರ್ ಸೂಪರ್ sir👌👌

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಋಣಿ...ಸದಾ ನನ್ನ ಬರಹ ಓದುತ್ತ ಇರ್ರಿ... ಧನ್ಯವಾದಗಳು..

      ಅಳಿಸಿ

  2. ಚೆನ್ನಾಗಿದೆ ಸರ್. ಕೆಲಸ ಸಿಗೋ ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಬೇಕಾದರೂ ಕೆಲಸ ಮಾಡಬಲ್ಲೆ, ಎಂಬ ಸಾಲುಗಳನ್ನು ನೀವು ನಮಗೆ ಬುನಾದಿ ತರಬೇತಿ ಯಲ್ಲಿ ಹೇಳಿದ್ದು ನೆನಪಾಯಿತು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಜೀವನ ಹೀಗೆನೇ.. ಆಗ ಅನಿವಾರ್ಯ ಇತ್ತು ಎಲ್ಲಿ ಬೇಕಾದರೂ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇತ್ತು. ಆದರೆ ಅಲ್ಲಿಗೋದ ಮೇಲೆ ಪರಿಸ್ಥಿತಿ ಅರಿವಾಯಿತು. ಆದರೂ ನಾವು ಗರಿಷ್ಠ ಮಿತಿಯ ಮೀರಿ ತಡೆದುಕೊಂಡು ಬಂದಿದ್ದೆವೆ. ನಮಗೂ ಮುಂಚೆ ಅಲ್ಲಿ ಕೆಲಸ ಮಾಡಿದವರು ದುಶ್ಚಟಗಳಿಗೆ ದಾಸರಾಗಿದ್ದಾರೆ. ರೋಡಿಲಗಲ,ಬಸ್ ಇಲ್ಲ,ನೆಟ್ ವರ್ಕ ಇಲ್ಲ, ಎಲ್ಲಿಗೂ ಹೋಗೋ ಹಾಗೆ ಇಲ್ಲ ಬರೋ ಹಾಗೆ ಇಲ್ಲ.. ಏನು ಮಾಡಿಯಾರು ಪಾಪ ಕಾಲಕ್ರಮೇಣ ದುರಬ್ಯಾಸಗಳ ಮೊರೆ ಹೋಗಿದ್ದಾರೆ. ಅವರಿಗೊಲಿಸಿಕೊಂಡರೆ ನಾವು ಬೆಟರ್...

      ಅಳಿಸಿ
  3. ಗುರುಗಳೇ,

    ನಿಜವಾಗಿಯೂ ಆ ರಾಜಾಪುರದ ದಿನಗಳೇ ಚೆಂದ,

    ಶೌಚಾಲಯ ಇಲ್ಲದ ಊರಲ್ಲಿ ನಾನು ನೀವು ಮೌನೇಶ್, ಪಿಟಿ ಮಂಜು ಬೆಳಿಗ್ಗೆ ಎದ್ದು ಕೆರೆ ಕಡೆ ನಡೆದುಕೊಂಡು ಹೋಗುವುದು ನೆನಸಿದ್ರೆ ಸಿಕ್ಕಾಪಟ್ಟೆ ನಗು ಬರುತ್ತಿದೆ..😁

    ಉಡುಪಿ ಕಡೆ ನಾವು ಮೀನು ತಿನ್ನುವುದರಲ್ಲಿ expert ಆದ್ರೆ, ನೀವೆಲ್ಲ ರೊಟ್ಟಿ, ಮುದ್ದೆ ತಿನ್ನುವುದರಲ್ಲಿ expert,

    ಅಂತು ರಾಜಾಪುರದಲ್ಲಿ ಕಳೆದ ನಾಲ್ಕು ವರ್ಷಗಳ ಜೀವನ ಮರೆಯಲಾಗದ್ದು,

    ಚೆಂದವಾಗಿ ಬರೆದಿದ್ದೀರಿ ಗುರುಗಳೇ ಆ ದಿನಗಳ ನೆನಪುಗಳನ್ನು..😂👏👏

    ಪ್ರತ್ಯುತ್ತರಅಳಿಸಿ
  4. ಹಿಂದಿನ ಅಂತಹ ಜೀವನದ ಅನುಭವಗಳು ನಂತರದ ದಿನಗಳಲ್ಲಿ ಅವೇ ಮರೆಯಲಾರದ ಸವಿ ನೆನಪುಗಳು ಅಲ್ವಾ ಸರ್....

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..