ಕಳ್ಳ ಅಡುಗೆಭಟ್ಟನಾದ ಕಥೆ..

ಕಳ್ಳ  ಅಡುಗೆ ಭಟ್ಟನಾದ ಕಥೆ..


ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು   ದೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ  ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ ಗೆಳೆಯ ಹಿರಿಯೂರಿನಲ್ಲಿ  ಕಾರ್ ಗ್ಯಾರೇಜ್ ಮಾಲಿಕ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಬರ್ರಿ  ಬ್ರದರ್ ನೋಡೋಣ ಎಂದು ಹೇಳಿದ್ದರು. 

 2014 ನೇ ಇಸವಿಯ ಮಾರ್ಚಿ ತಿಂಗಳಲ್ಲಿ  ಒಂದಷ್ಡು ದುಡ್ಡು ಹಿಡಿದುಕೊಂಡು  ಹಿರಿಯೂರಿನ ಜೇಮ್ಸ್ ಮನೆಗೆ  ಬಂದೆ. ಹಳೆಯ ಸ್ನೇಹಿತ ಜೇಮ್ಸ್  ನಾನು ಮನೆಗೆ ಹೋದ ಸಂಭ್ರಮಕ್ಕೆ ವೆರೈಟಿ ವೆರೈಟಿ  ತಿಂಡಿ ತಿನಿಸು ಮಾಡಿಸಿದ್ದ. ಇಬ್ಬರೂ ತಿಂಡಿಯನ್ನೇ ಊಟದಂತೆ ಹೊಟ್ಟೆತುಂಬಾ ಮಾಡಿ ಶ್ರೀಧರ್  ಗ್ಯಾರೇಜ್ ಬಳಿ ಬಂದೆವು. ನಮ್ಮ ಬಜೆಟ್ ಇಷ್ಟು ಎಂದು ಹೇಳಿದ್ದಕ್ಕೇ  ಅವರು ಯಾರು ಯಾರಿಗೋ ಕಾಲ್ ಮಾಡಿ  ಈ  ಬಜೆಟ್ ಗೆ ಒಂದು ಕಾರು ಬೇಕು ಎಂದೇಳಿದರು. ಅದಕ್ಕೆ ಅಮರಾಪುರದಲ್ಲಿ  ಒಂದು ಕಾರ್ ಇದೆ,ಆದರೆ ಯಾವುದೋ ಪಾರ್ಟಿ ನೋಡಿಹೋಗಿದ್ದಾರೆ ಸಂಜೆಗೆ ಪೈನಲ್ ಮಾತು ತಿಳಿಸುವೆವು ಎಂದು ಹೇಳಿದ್ದರಿಂದ  ಸಂಜೆ ನೋಡುವ ಬಿಡಿ  ಜೇಮ್ಸ್  ಎಂದು ಹೇಳಿದೆ.

ಜೇಮ್ಸ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯೂ ಆಗಿದ್ದುದ್ದುದರಿಂದ ಅವರ ಚರ್ಚಿನ ಸದಸ್ಯರೊಬ್ಬರು ಹೈವೇ ಪಕ್ಕ  ಹೊಸದಾಗಿ ಆರಂಭ ಆಗಬೇಕಿದ್ದ ಹೋಟೆಲ್ ನ್ನು ಅವರ ಪಾದ್ರಿಯೂ ಆಗಿದ್ದ ಜೇಮ್ಸ್ ಉದ್ಘಾಟನೆ ಮಾಡಬೇಕಿತ್ತು.  ಪೂರ್ವ ನಿರ್ಧರಿತ ಯೋಜನೆಯಂತೆ ಬಾ ಇಲ್ಲಿ ಒಂದು ಹೋಟೆಲ್ opening ceremony  ಇದೆ ಹೋಗೋಣ ಎಂದು ಇಬ್ಬರೂ ಪಲ್ಸರ್ ಬೈಕ್ ಹತ್ತಿ ಹೊರಟೆವು. ಜೇಮ್ಸ್ ನ ಆಗಮನಕ್ಕಾಗಿಯೇ ಕಾಯುತ್ತಿದ್ದ ಹತ್ತಿಪ್ಪತ್ತು ಜನ  ನಾವು ಹೋದ ತಕ್ಷಣವೇ ಅವರ  ಕ್ರಿಶ್ಚಿಯನ್ ಧರ್ಮದಂತೆ ಪ್ರಾರ್ಥನೆ ಮಾಡಿದರು. ನನಗೆ ಈ ಪ್ರಾರ್ಥನೆಗಳ ಹಾಡಲು ಬಾರದೆ ಇದ್ದುದರಿಂದ ನಾನು ಕೇವಲ ಹಾಜರಿ ಇದ್ದೆ. ಅದಾದ ನಂತರ ನಾನು ಮತ್ತು ಜೇಮ್ಸ್ ಇಬ್ಬರೂ ಟೇಪ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿಬಿಟ್ಟೆವು.ಒಳಗಡೆ ಹೋಗಿ ಸುತ್ತಲೂ ನೋಡಿ ಕಿಚನ್ ಅಲ್ಲಿ ಲುಂಗಿ ಟವೆಲ್ ಹಾಕಿ ನಿಂತಿದ್ದ ಸಾಧಾರಣ ಎತ್ತರದ ಒಬ್ಬ ವ್ಯಕ್ತಿಯನ್ನು ಏನ್ ಕೆಂಚಣ್ಣ ಅರಾಮಿದ್ದೀಯಾ? ಎಂದು ಜೇಮ್ಸ್ ಕೇಳಿದ. 

ಹ್ಞೂ ಪಾಸ್ಟರ್ ಅರಾಮಿದ್ದೀನಿ..

ಜೇಮ್ಸ್: ಏನ್ ಮಾಡೀಯಾ ಉಣ್ಣಾಕೆ ?

ಬಟ್ಟ: ಬಿರಿಯಾನಿ ಪಾಸ್ಟ್ರೇ..

ಪಾತ್ರೆಯ ಮುಚ್ಚಳ ಸರಿಸಿ ನೋಡಿ ಹ್ಞೂ ಚೆನ್ನಾಗಿ ಮಾಡಿಯಾ ಎಂದು ಜೇಮ್ಸ್ ಹೇಳಲು ಕುತ್ಕೋಳಿ ಪಾಸ್ಟರೇ ಊಟ ಮಾಡರಂತೆ ಎಂದು ವಾಟರ್ ಬಾಟಲ್ ಕೊಟ್ಟು ನಮ್ಮಿಬ್ಬರನ್ನು ಕೂರಿಸಿದರು.

ಜೇಮ್ಸ್: ಕೆಂಚಣ್ಣ ಬಾರಪ್ಪ  ಇಲ್ಲಿ  ಎಂದು ಕರೆದ.

ಕೆಂಚಣ್ಣ:  ಹೇಳಿ ಪಾಸ್ಟರೇ  ಎಂದು ಬಂದು ನಿಂತರು.

ಜೇಮ್ಸ್ :ಮೇಷ್ಟರೇ ಇವನು ಯಾರ್ ಗೊತ್ತಾ?

ನಾನು;ಗೊತ್ತಿಲ್ಲಪ್ಪ..

ಕೆಂಚಪ್ಪ:ಹೇ ಬಿಡ್ರಿ ಪಾಸ್ಟರೇ  ಅದೆಲ್ಲಾ ಯಾಕೆ ಎಂದು ತಲೆ ಕರೆದುಕೊಂಡು ಕಿಚನ್ ಕಡೆಗೆ ಹೋಗಲು ತಿರುಗಿದ.

ಜೇಮ್ಸ್: ಹೇಯ್ ಬಾ ಇಲ್ಲಿ ಬಾ ಇಲ್ಲಿ... ನಮ್ ಮಾಸ್ಟರ್ ಗೆ ನಿನ್ ಪರಿಚಯ ಮಾಡಿಸಿಕೊಡುವೆ ಬಾ ಎಂದು ಜೇಮ್ಸ್ ವಾಪಾಸು ಕರೆದ.

ಜೇಮ್ಸ್: ಮಾಸ್ಟರೇ ಇವನು ಕೆಂಚಪ್ಪ  ಅಂತ.. ಐದಾರು ವರ್ಷಗಳ ಹಿಂದೆ ಪೋಲಿಸರಿಗೆ ಮೋಸ್ಟ್ Wanted person ಆಗಿದ್ದವನು.

ನಾನು:ಹೌದಾ? ಏನಪ್ಪ ಕಥೆ?  ಆ ಲೆವೆಲ್ ಹವಾ ಮಾಡೀಯೇನು ಎಂದೆ..

ಕೆಂಚಪ್ಪ;ಹಂಗೇನಿಲ್ಲ ಬಿಡಿಸಾರ್  ಎಂದು ತಲೆಕೆರೆದುಕೊಳ್ಳುತ್ತಾ ನಾಚುತ್ತಾ ನುಡಿದ..

ನಾನು:ಇರಲಿ ಪರವಾಗಿಲ್ಲ ಹೇಳು ಕೆಂಚಣ್ಣ ಎಂದು ಕೇಳಿದೆ.

ಜೇಮ್ಸ್: ಮಾಸ್ಟರೇ ಇವನಾವು ಅತಿಂಥಾ ಸ್ಟೋರಿ ಅಲ್ಲ ನೀನ್ ಕೇಳಿದ್ರೆ ಶಾಕ್ ಆಗತ್ತೀಯಾ..

ನಾನು:ಹೌದಾ? ಹಂಗಾದರೇ ಹೇಳಲೇ ಬೇಕಪ್ಪ ನೀನು ಹೇಳು ಹೇಳು ಅಂದೆ. 

ಜೇಮ್ಸ್: ಕೆಂಚಣ್ಣ ಅದು ಚಳಿಕಾಯಿಸ್ಕೊಂಡಿದ್ದು  ಒಂದು ಹೇಳು ನಮ್ ಮಾಸ್ಟರ್ ಅಂಥಾವೆಲ್ಲಾ ತಿಳುಕೋ ಬೇಕು ಹೇಳು ಹೇಳು..

ನಾನು:ಹೇಳಪ್ಪ ಏನೋ ಇಂಟರೆಸ್ಟಿಂಗ್ ಇದೆ  ಅನಿಸುತ್ತದೆ ಹೇಳು ಎಂದೆ.

ಕೆಂಚಪ್ಪ: ಸಾರ್ ಅದು ಒಂದು  ಚಳಿಗಾಲದಲ್ಲಿ ಮನೆಯಲ್ಲಿ ರಾತ್ರಿ ಮಲಗಿದ್ದೆ ಸಾರ್ . ರಾತ್ರಿ ಹನ್ನೆರಡು - ಹನ್ನೆರಡುವರೆ ಆಗಿತ್ತು. ಯಾಕೋ ನಿದ್ದೆ ಬರಲಿಲ್ಲ. ಹಂಗೆ  ಬೀಡಿ ಪೆಟ್ಟಿಗೆ  ಹಿಡಿದು ಒಂದು ಬೀಡಿ ಹಚ್ಚಿಕೊಂಡು ಹಾಗೆ ಎರಡ್ಮೂರು ಕಿಮೀ ನಡೆದು ಹೋಗುತ್ತಾ ಇದ್ದೆ.ಅಲ್ಲೊಂದು ಒಳ್ಳೇ ಸಾಹುಕಾರರ ಮನೆ ಕಾಣಿಸಿತು. ನುಗ್ಗಾಣ ಅನಿಸಿತು ನುಗ್ಗಿದೆ ಸಾರ್ ಅಂದ..

ನಾನು:ಇದೇನೋ ಮಾರಾಯ ಎಷ್ಟು ಸುಲಭವಾಗಿ ಹೇಳುತ್ತೀಯಾ  ಮನೆಯಲ್ಲಿ ಯಾರೂ ಇರಲಿಲ್ಲೇ?

ಕೆಂಚಪ್ಪ: ಇದ್ದರು ಸಾರ್. ನಾನು ಹಿಂದಿನ ಬಾಕ್ಲಿಂದ ಹೋದೆ.

ನಾನು:ಒಳಗೆ ಹೋಗಿ ಏನು ಮಾಡಿದೆ?

ಕೆಂಚಪ್ಪ:ಸಾರ್ ಒಳಗಡೆ ಹೋದ್ನಾ ಒಬ್ಬರೋ ಇಬ್ಬರು ಹಾಲ್ನಲ್ಲಿ ಮಲಗಿದ್ದರು ನಾನು ನಿಧಾನವಾಗಿ ಒಂದು ರೂಂ ಒಳಗೆ ಹೋದೆ. ಅಲ್ಲಿ ಗಾಡ್ರೇಜ್ ಓಪನ್ ಮಾಡಿದೆ. 

ನಾನು:ಕೀ ಇತ್ತಾ ಅಥವಾ ಅದನ್ನೂ ಒಡೆದು ತೆಗೆದಾ?

ಕೆಂಚಪ್ಪ:ಸಾರ್ ನಮ್ ಜನ ಬಡವರಾದರೂ ಶ್ರೀಮಂತರಾದರೂ ಬೀರೂ ಕೀ ಬೀರಿನ ಮೇಲೆ, ಇಂಟರ್ಲಾಕರ್ದು ಅಲ್ಲೇ ಎಲ್ಲಿಯಾದರೂ ಬಟ್ಟೆ ಕೆಳಗೆ ಇಟ್ಟೇ ಇಟ್ಟಿರುತ್ತಾರೆ ಸಾರ್. ಕೀ ಇಲ್ಲದೇ ಇರೋ ಸಂದರ್ಭಗಳು ತುಂಬಾ ಕಡಿಮೆ. ಒಂದುವೇಳೆ ಕೀ ಸಿಗಲಿಲ್ಲ ಅಂದರೆ ಸ್ಕ್ರೂಡ್ರೈವರ್/ರಾಡ್ನಿಂದ ಓಪನ್ ಮಾಡುತ್ತೀವಿ ಸಾರ್ ಎಂದ.

ನಾನು:ಬೀರು ಒಳಗೆ ದುಡ್ಡು ಬಂಗಾರ ಇತ್ತಾ?

ಕೆಂಚಪ್ಪ:ಒಂದು ಇಂಟರ್ ಲಾಕ್ ಓಪನ್ ಮಾಡ್ಲಿಲ್ಲ ಸಾರ್. ಆದರೆ ನೂರು ರುಪಾಯಿ ನೋಟಿನವು ಬಹಳ ದುಡ್ಡು ಇತ್ತು. ಅಲ್ಲೇ ಕಾಲು ಹೊರೆಸಲು ಹಾಕಿದ್ದ ಒಂದು ಗೋಣಿಚೀಲ ತಗಂಡು ಎಲ್ಲವನ್ನೂ ಆ ಚೀಲಕ್ಕೆ ತುಂಬಿಕ್ಯಂಡೆ ಸಾರ್. ಚೀಲದಲ್ಲಿ ಮುಕ್ಕಾಲು ಭಾಗ ಆಗಿತ್ತು. ಆ ಚೀಲವನ್ನು ಬುಜಕ್ಕೆ ಹಿಂದಕ್ಕೆ ನೇತುಹಾಕಿಕೊಂಡು,ಕೊರೆಯ ತುದಿಯನ್ನು ಎದೆಯ ಮುಂದೆ ಎರಡೂ ಕೈಯಲ್ಲಿ ಹಿಡಿದುಕೊಂಡು ಬರುತ್ತಾ ಇದ್ದೆ. ಎರಡುವರೆ ಮೂರು ಗಂಟೆ ಆಗಿತ್ತು ಸಾರ್. ಸಳಿ(ಚಳಿ) ಅಂದ್ರೆ ತುಂಬಾ ಸಳಿ ಆಗುತ್ತಿತ್ತು.ಅದಕ್ಕೆ ಅಲ್ಲೇ ಯಾವುದೋ ಅರ್ಧಂಬರ್ದ ಕಟ್ಟಿದ್ದ ಒಂದು ಮನೆಯೊಳಗೆ ಹೋಗಿ ಚೀಲ ಕೆಳಗಿಟ್ಟು ಒಂದರಿಂದೆ ಒಂದು ಮೂರ್ನಾಲ್ಕು ಬೀಡಿ ಎಳೆದೆ ಸಾರ್,ಸಳಿ ಕಮ್ಮಿಯಾಗಲಿಲ್ಲ.ಅದಕ್ಕೇ ಚೀಲದಾಗೆ ನೋಟ್ ಇದ್ದವಲ್ಲ ಅವುಗಳಿಗೆ ಬೆಂಕಿ ಹಾಕಿ ಬೆಳಕು ಹರಿಯೋವರೆಗೂ ಚಳಿಕಾಯಿಸ್ಕಂಡೆ ಸಾರ್..

ನಾನು: ಅಬ್ಬಾಬ್ಬಾ ಕೆಂಚಣ್ಣ.  ಇದು ಅಲ್ಲ ನೋಡು ಬಹಳ ದಡ್ಡ ಕೆಲಸ ಮಾಡಿದೆ ನೀನು. ಕಳ್ಳತನ ಮಾಡಬಾರದಿತ್ತು, ಆದರೂ ಮಾಡಿದ್ದೆ  ಅದರಲ್ಲೇ ಜೀವನ ಕಟ್ಟಿಕೊಳ್ಳುವುದ ಬಿಟ್ಟು ಬೆಂಕಿಹಾಕಿ ಚಳಿ ಕಾಯಿಸ್ಕಂಡೀಯಾ?

ಕೆಂಚಪ್ಪ:ಸಾರ್ ನಾನು ಕಳ್ಳತನ ಮಾಡ್ತಿರೋದು ಖುಷಿ ಮತ್ತು ಟೈಮ್ ಪಾಸ್ ಗೆ ಸಾರ್. ಅಲ್ಲಾ ಸಾರ್ ಎಂಥಹ ಸಾವುಕಾರ ಆದರೂ ದುಡ್ಡಲ್ಲಿ ಯಾರಾದ್ರೂ ಚಳಿ ಕಾಯಿಸ್ಕೊಂಡಿದ್ದಾರಾ ಸಾರ್ ನೀವ್ ಎಲ್ಲಿಯಾದ್ರೂ ಕೇಳಿರಾ? ನಾಲ್ಕಾಣೆ ಗಲೀಜಲ್ಲಿ ಬಿದ್ದಿದ್ದರೂ ಎತ್ಕಂಡ್ ಜೇಬಲ್ಲಿ ಹಾಕ್ಕೋತ್ತಾರೆ ಆದ್ರೆ ನಾನು ದುಡ್ಡಲ್ಲಿ ಸಳಿ(ಚಳಿ)ಕಾಯಿಸ್ಕೊಂಡೀನೀ ಅದೇ ಸಾರ್ ನನ್ ರೆಕಾರ್ಡ್..


ನಾನು: ಅಬ್ಬಾ ಬ್ಬಾ ಬ್ಬಾ... ಬಾರೀ ಇದೀಯಾ ಕೆಂಚಣ್ಣ ನೀನು.ಅಂದಾಜು ಎಷ್ಟು ಕಟ್ಟು ಇದ್ದವಪ್ಪ ಅವು ನೋಟುಗಳು?

ಕೆಂಚಪ್ಪ:ಸಾರ್ ನಾನು ಎಣಿಸಲಿಲ್ಲ.ಆದರೆ ಮುವತ್ತು ನಲವತ್ತು ಕಟ್ಟು ಇದ್ದವು ಸಾರ್.

ನಾನು:ಅಲ್ಲಪ್ಪಾ ಕೆಂಚಣ್ಣಾ ತೂ ನಿನ್ನಾ.. ಅನ್ಯಾಯವಾಗಿ ಮೂರು ನಾಲ್ಕು ಲಕ್ಷ ಸುಟ್ಟಾಕಿಯಲ್ಲಾ..

ತಲೆ ತಗ್ಗಿಸಿಕೊಂಡು ನಿಂತ..

ಮುಂದುವರೆದು ಅಲ್ಲ ಕೆಂಚಣ್ಣ ಈ ಕಳ್ಳರಿಗೆ ಕಳ್ಳತನ ಮಾಡಲು ಸರಿಯಾದ ಸಮಯ ಯಾವುದು?

ಕೆಂಚಪ್ಪ: ಸಾರ್ ಸಾಮಾನ್ಯವಾಗಿ ಕಳ್ಳತನ ಮಾಡಲು ಸರಿಯಾದ ಸಮಯ ಅಂದರೆ ಮಧ್ಯರಾತ್ರಿ ಒಂದು ಗಂಟೆಯಿಂದ ಮೂರು- ಮೂರುವರೆ ವರೆಗೆ ಸರಿಯಾದ ಸಮಯ. ಈ ಟೈಮ್ನಲ್ಲಿ ಸಣ್ಣಪುಟ್ಟ ಶಬ್ಧ ಆದರೂ ಯಾರೂ ಎದ್ದೇಳಲ್ಲ ಸಾರ್.

ನಾನು:ನೀವು ಮನೆಗಳಿಗೆ ಬೀಗ ಹಾಕಿದ ಮನೆಗಳು ಕಳ್ಳತನಕ್ಕೆ ಸೂಕ್ತವೇ?

ಕೆಂಚಣ್ಣ: ಹ್ಞು ಸಾರ್ ಮತ್ತೆ ಬೀಗ ಹಾಕಿದ್ದ ಮನೆಗಳಾದರೆ ಯಾವುದೇ ಭಯ ಇರಲ್ಲ ನಿರಾತಂಕವಾಗಿ ಕೆಲಸ ಮಾಡಬಹುದು. ಆದರೆ ವಾಸ ಇರುವ ಮನೆಗಳಲ್ಲಿ ಎಷ್ಟು ಜನ ಇದಾರೆ ಅವರು ಎಲ್ಲೆಲ್ಲಿ ಮಲಗಿರುತ್ತಾರೆ ಅಂತ ಸ್ಟಡಿ ಮಾಡಬೇಕಾಗತ್ತೆ..

ನಾನು:ಮನೆಗಳಿಗೆ ಬೀಗ ಡೋರ್ ಲಾಕ್ ಮಾಡಿರುತ್ತಾರಲ್ಲ ಅದೇಗೆ ಒಳಗೆ ನುಗ್ಗುವಿರಿ?

ಕೆಂಚಣ್ಣ:ಬೀಗ ಒಡೆಯುತ್ತೀವಿ ಸಾರ್..
ಒಂದು ಒಂದುವರೆ ಅಡಿಯ ಒಂದು ರಾಡ್/ಸ್ಕ್ರೂ ಡ್ರೈವರ್ ಇದರೆ ಸಾಕು ಅಷ್ಟೇ. ಡೋರ್ ಲಾಕ್ ಈತರ ಇದ್ದರೆ ಬಾಗಿಲಿನ ಹಲಗೆ/ಕಿಟಕಿ ಹೀಗೆ ಪರ್ಯಾಯವಾಗಿ ಹೇಗೆ ತೂರಿ ಹೋಗಲು ಸಾದ್ಯವೋ ನೋಡುತೀವಿ..

ಪೋಲಿಸ್ ಕೈಗೆ ನೀನ್ ಸಿಕ್ಕಿಲ್ಲವೋ?

ಕೆಂಚಣ್ಣ: ಈ ಕೇಸಲ್ಲಿ ಇಲ್ಲ ಸಾರ್ ಆದ್ರೆ ಬೇರೆ ಕೇಸಲ್ಲಿ ಹಿಡಿದಿದ್ದರು. ಅವರೇ ಸಾರ್ ನನ್ನ ಹಾಳ್ ಮಾಡಿದ್ದು

ನಾನು:ಏಯ್ ಕಳ್ಳತನ ಮಾಡುವುದು ತಪ್ಪಲ್ಲವೇನು?ತಪ್ಪು ಮಾಡಿರುವುದು ನೀನು ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು ಅಲ್ಲವೇ?

ಕೆಂಚಣ್ಣ: ಸಾರ್ ನಾನು ಮಾಡದ ತಪ್ಪಿಗಳಿಗೆಲ್ಲ   ಪೋಲಿಸ್ ನವರು ನನ್ನ ಮೇಲೆ ಹೋರಿಸಿದರು ಸಾರ್ 

ನಾನು:ಹೋಗ್ಲಿಬಿಡು ನೀನು ಕಡಿಮೆ ತಪ್ಪು ಮಾಡಿದ್ದರೆ ನಿನಗೆ ನ್ಯಾಯ ಸಿಗತ್ತೆ..

ಕೆಂಚಣ್ಣ: ಸಾರ್ ದೇವರ ಕೃಪೆಯಿಂದ ನಾನು ಬೇಲ್ ಮೇಲೆ ಇದ್ದೀನಿ. ಇನ್ಬೂ ಒಂದೆರಡು ಕೇಸ್ ಇದಾವೆ ಕ್ಲಿಯರ್ ಮಾಡಿಕ್ಯಂತೀನಿ ಸಾರ್..

ಆಗ್ಲಿ ಒಳ್ಳೇದಾಗಲಿ ಆದರೆ ಅಪರಾಧ ಮಾಡಿ ಜೈಲಿಗೆ ಹೋದ್ರೆ ಹೆಂಡತಿ ಮಕ್ಕಳ ಗತಿ ಏನು ಕೆಂಚಣ್ಣ? ಹೋಗ್ಲಿಬಿಡು ಇನ್ಮೇಲೆ ಆ ಕೆಲಸ ಮಾಡಬ್ಯಾಡ.

ಇಲ್ಲಾ ಸಾರ್ ಬಿಟ್ಟಾಕಿನೀ ಮಾಡಲ್ಲ ಸಾರ್ ಅಂದ 


ನಾನು:ಇಷ್ಟೋತ್ತು ಬಹಳ ಮಾಹಿತಿಕೊಟ್ರೀ.. ಬಿರಿಯಾನಿ ತುಂಬಾ ಸಕತ್ತಾಗಿದೆ. ಇದೇ ಕೆಲಸ ಮಾಡಿಕೊಂಡು ಮುಂದುವರೆಯಪ್ಪ ಮತ್ತೆ ಆ ನಿನ್ ಮೂಲ ಕೆಲಸಕ್ಕೆ ಕೈ ಹಾಕಬೇಡ. ಅನ್ಯಾಯವಾಗಿ ಗಳಿಸಿದ್ದು ನಮಗೆ ದಕ್ಕದೇ ಅದರಿಂದ ನಮ್ಮ ಮಾನ ಮರ್ಯಾದೆಯೂ ಹೋಗತ್ತೆ. ಸಾರ್ವಜನಿಕವಾಗಿ 'ಕಳ್ಳ' ಎನ್ನುವ ಪಟ್ಟ ಕಟ್ಟಿಕೊಂಡು ಬದುಕಬೇಕಾಗತ್ತೆ. ಗೌರವ ಇರಲ್ಲ ಇದೇ ಕೆಲಸ ಮಾಡಿಕೊಂಡು ಗೌರವಯುತವಾಗಿ ಬದುಕು ಎಂದೇಳಿ ಎಲ್ಲರಿಗೂ bye ಹೇಳಿ ಹಿಂದಿರುಗಿದೆವು.

ಲೇಖನ ಮುಗಿಸುವ ಮುನ್ನ ಪರಿಸ್ಥಿತಿಗಳು ಎಂಥೆಂಥಾ ದುಷ್ಕೃತ್ಯ ಮಾಡಿಸುತ್ತದೆ. ಆದರೆ ನಾವು ಆಯ್ದುಕೊಳ್ಳಬೇಕಾದದ್ದು ನಮ್ಮ ಗೌರವ ಕಾಪಾಡುವಂತಿರಬೇಕು. ವೇಗವಾಗಿ ಹಿಂದಿರುಗುವಾಗ   ರಸ್ತೆ ಬದಿಯ ಲಂಟಾನ ಗಿಡದಲ್ಲಿ ಒಂದು ಜೇನು ಕಂಡು ಜೇಮ್ಸ್ ಗಾಡಿ ನಿಲ್ಲಿಸು ಅಂತ ಹೇಳಿದೆ. ಜೇಮ್ಸ್ ಗೆ ಅಚ್ಚರಿಯೋ ಅಚ್ಚರಿ.. ಏನ್ ಕಣ್ಣಜ್ಜ ನಿನ್ನಾವು, ಇಷ್ಟು ಸ್ಪೀಡ್ ಲ್ಲಿ ಹೆಂಗೆ ಕಾಣಿಸಿತು ಎಂದು ಇಳಿದು ಎಲ್ಲಿದೆ ಎಂದು ಹುಡುಕುತ್ತಿದ್ದ. ಇಲ್ಲೇ ಇಲ್ಲವೇ ಜೇಮ್ಸ್‌‌ ಎಂದು ತೋರಿಸಿ ಅದನ್ನು ಕಿತ್ತೆ. ದೂರದಲ್ಲಿ ಹೋಗಿ ಜೇಮ್ಸ್ ನಿಂತಿದ್ದ. ಜೇನು ಕೈಯಲ್ಲಿ  ಹಿಡಿದು ಇಬ್ಬರೂ ತಿನ್ನತೊಡಗಿದೆವು. ಜೇನು ಸವಿಯುತ್ತಾ ಅಲ್ಲಾ ಜೇಮ್ಸ್ ಆ ಕೆಂಚಪ್ಪ ಕಳ್ಳತನ ಬಿಡುತ್ತಾನ?

ಜೇಮ್ಸ್:ಹ್ಞೂ ಮೇಷ್ಟ್ರೇ.. ಒಳ್ಳೆಯವನಾಗಿದ್ದಾನೆ. ಈಗ ನಾಲ್ಕೈದು ವರ್ಷಗಳ ಕಾಲ ಅಂತಹವು ಯಾವೂ ಮಾಡಿಲ್ಲ. ಬದಲಾಗಿದ್ದಾನೆ. ಇಲ್ಲಂದ್ರೆ ಅವನಿಗೆ ದಿನಕ್ಕೆ ಮುನ್ನೂರು ನಾನ್ನೂರು ಕಳ್ಳತನ ಮಾಡುವುದು ಎಷ್ಟತ್ತು ಅಂದ.

ಬದಲಾಗಲಿ ಜೇಮ್ಸ್ ಏನೋ ಏನೋ ಬ್ಯಾಡ್ ಟೈಂ  ಲ್ಲಿ ಏನೋ ಆಗಿರತ್ತೆ ಆದರೆ ಅದನ್ನು ಬದಲಾಯಿಸ್ಕೊಂಡು ಬಾಳಬೇಕು.ಅದೇ ಲಾಸ್ಟ್..ಆ ಕೆಂಚಪ್ಪ ಎಲ್ಲಿದ್ದಾನೋ ಹೇಗಿದ್ದಾನೋ ಗೊತ್ತಿಲ್ಲ ಒಳ್ಳೆಯ ವನಾಗಿಯೇ ಗೌರವದಿಂದ ಬದುಕುತ್ತಿದ್ದಾನೆ ಎನ್ನುವ ನಂಬಿಕೆ ಇದೆ.




✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

  1. ಲ ಈ ರೀತಿಯ ನೈಜ ಸಂಗತಿಗಳನ್ನು ಎಲ್ಲಿ ಹುಡುಕಿ ಬರೆಯುತ್ತೀರಾ ತುಂಬ ಚೆನ್ನಾಗಿ ಮೂಡಿ ಬಂದಿದೆ ಸರ್

    ಪ್ರತ್ಯುತ್ತರಅಳಿಸಿ
  2. ಪ್ರತ್ಯುತ್ತರಗಳು
    1. ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಲಿಖಿತ್...

      ಅಳಿಸಿ
    2. ಸರ್ ಬರೆಹ ಚೆನ್ನಾಗಿ‌ಮೂಡಿಬಂದಿದೆ. ಬರೆಯುವ ಶೈಲಿಯೊಂದು ನಿಮಗೆ ದಕ್ಕಿದೆ. ಓದಿ ಸಂತೋಷ‌ ಮತ್ತು ಹೆಮ್ಮೆ ಎನಿಸಿತು. ಮುಂದುವರಿಯಲಿ......

      ಅಳಿಸಿ
    3. ನಿಮ್ಮ ಪ್ರೀತಿಯ ನುಡಿಗಳಿಗೆ ನಾನು ಋಣಿ ಸಾರ್.. ನಿಮ್ಮ ಸಹಕಾರ ಮಾರ್ಗದರ್ಶನ ಸದಾ ಹೀಗೆ ಇರಲಿ....

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..